ಚಿಂತಾಮಣಿ: ರಾಜ್ಯದ ಪ್ರಸಿದ್ದ ಯಾತ್ರಾಸ್ಥಳ ತಾಲ್ಲೂಕಿನ ಆಲಂಬಗಿರಿಯ ಕಲ್ಕಿ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವವು ಸಾವಿರಾರು ಜನ ಭಕ್ತರ ಸಮ್ಮುಖದಲ್ಲಿ ಚೈತ್ರಮಾಸದ ಹುಣ್ಣಿಮೆಯಾದ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೇ ದೂರದ ಊರುಗಳಿಂದ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಸರತಿಯಲ್ಲಿ ನಿಂತು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕೈವಾರದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಯೋಗಿನಾರೇಯಣ ಯತೀಂದ್ರರ ಉತ್ಸವಮೂರ್ತಿಯನ್ನು ತಂದು ಬ್ರಹ್ಮ ರಥೋತ್ಸವದ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು. ಮಠದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ನೇತೃತ್ವದಲ್ಲಿ ಶ್ರೀಕೃಷ್ಣ ಗಂಧೋತ್ಸವ ಸೇವೆಯನ್ನು ಸಲ್ಲಿಸಲಾಯಿತು.
ಗಂಧೋತ್ಸವದ ನಂತರ ಆಸ್ಥಾನ ಸೇವೆಯನ್ನು ನೆರವೇರಿಸಿ ಶ್ರೀದೇವಿ, ಭೂದೇವಿ ಶ್ರೀನಿವಾಸಮೂರ್ತಿಯನ್ನು ಶಾಸ್ತ್ರೋಕ್ತವಾಗಿ ಮಂಗಳ ವಾದ್ಯಗಳೊಂದಿಗೆ ತಂದು ಅಲಂಕೃತಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ರಥವು ಮುಂದೆ ಸಾಗುತ್ತಿದ್ದಂತೆ ಭಕ್ತರ ಗೋವಿಂದ ನಾಮಸ್ಮರಣೆ ಮುಗಿಲು ಮುಟ್ಟಿತು. ದೇವಾಲಯದ ಸುತ್ತಲೂ ಭಕ್ತರು ಜೈಕಾರ ಹಾಕುತ್ತಾ ಸಡಗರ ಸಂಭ್ರಮದಿಂದ ರಥವನ್ನು ಎಳೆದು ತಂದರು. ಮಾರ್ಗದ ಇಕ್ಕೆಲಗಳಲ್ಲಿ ನೆರೆದಿದ್ದ ನೂರಾರು ಭಕ್ತರು ತೇರಿಗೆ ಬಾಳೆಹಣ್ಣು, ಧವನವನ್ನು ಅರ್ಪಿಸಿದರು.
ಬಿಸಿಲಿನ ಬೇಗೆಯನ್ನು ತಣಿಸಲು ಸುತ್ತಮುತ್ತಲಿನ ಗ್ರಾಮಸ್ಥರು ಎತ್ತಿನ ಬಂಡಿ, ಟ್ರ್ಯಾಕ್ಟರ್ಗಳಲ್ಲಿ ಮಜ್ಜಿಗೆ, ಪಾನಕ, ಕೋಸುಂಬರಿಯನ್ನು ವಿತರಿಸುತ್ತಿದ್ದರು. ಯೋಗಿನಾರೇಯಣ ಮಠದ ಸಹಯೋಗದೊಂದಿಗೆ ಗ್ರಾಮಸ್ಥರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.
ಗ್ರಾಮದ ಶ್ರೀನಿವಾಸ್ ಮತ್ತು ತಂಡದವರು ನಾದಸ್ವರ ಸೇವೆಯನ್ನು ನಡೆಸಿಕೊಟ್ಟರು. ಶ್ರೀರಾಮನವಮಿ-ಯಿಂದಲೇ ಆರಂಭವಾಗಿರುವ ರಥೋತ್ಸವ ಕಾರ್ಯಕ್ರಮಗಳು 11 ದಿನಗಳ ಕಾಲ ನಡೆಯುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.