ADVERTISEMENT

ರೈಲು ತಡೆದ ‘ಸ್ತ್ರೀ ಶಕ್ತಿ’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 11:23 IST
Last Updated 3 ಸೆಪ್ಟೆಂಬರ್ 2015, 11:23 IST

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಬಂದ್‌ ಆಚರಣೆಯಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಸಿಐಟಿಯು ಆಶಾ, ಅಂಗನವಾಡಿ ಮತ್ತು ಅಕ್ಷರದಾಸೋಹ ಕಾರ್ಯಕರ್ತೆಯರು ಬುಧವಾರ ರಸ್ತೆಯಲ್ಲಿ ಕಾರು, ದ್ವಿಚಕ್ರ ವಾಹನಗಳನ್ನು ಅಲ್ಲದೇ ನಿಲ್ದಾಣದಲ್ಲಿ ರೈಲನ್ನೂ ಮುಂದೆ ಸಾಗಲು ಅವಕಾಶ ನೀಡಲಿಲ್ಲ.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಮೆರವಣಿಗೆ ಕೈಗೊಂಡ ಕಾರ್ಯಕರ್ತೆಯರು ಬೆಳಿಗ್ಗೆ 8ರ ಸುಮಾರಿಗೆ ರೈಲ್ವೆ ನಿಲ್ದಾಣದೊಳಗೆ ನುಗ್ಗಿ ಪ್ರತಿಭಟನೆ ನಡೆಸಿದರು.

ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಹೊರಟಿದ್ದ ರೈಲನ್ನು ಅಡ್ಡಗಟ್ಟಿದ ಅವರು ಬಂದ್‌ಗೆ ಬೆಂಬಲಿಸಲು ಒತ್ತಾಯಿಸಿದರು. ರೈಲು ಪ್ರಯಾಣಿಕರು, ಪೊಲೀಸರು ಸೇರಿದಂತೆ ಬಹುತೇಕ ಮಂದಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ರೈಲನ್ನು ತಡೆಯದಂತೆ ಮನವಿ ಮಾಡಿದರು. ಆದರೆ ಅದಕ್ಕೆ ಒಪ್ಪದ ಕಾರ್ಯಕರ್ತೆಯರು ಕೆಲ ಹೊತ್ತು ರೈಲನ್ನು ಅಡ್ಡಗಟ್ಟಿದರು.

ಬಂದ್‌ ಆಚರಣೆ ಹಿನ್ನೆಲೆಯಲ್ಲಿ ಬಸ್‌, ಲಾರಿ, ಕಾರು ಮುಂತಾದ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅದೇ ರೀತಿ ರೈಲಿನ ಸಂಚಾರ ಕೂಡ ಸ್ಥಗಿತಗೊಳಿಸಬೇಕು. ಬಂದ್‌ ಆಚರಣೆಯ ಉದ್ದೇಶ ಮತ್ತು ಮಹತ್ವವನ್ನು ರೈಲ್ವೆ ಪ್ರಯಾಣಿಕರಾದ ಜನಸಾಮಾಸ್ಯರು ಅರಿಯಬೇಕು. ಇದಕ್ಕೆ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕರಿಸಬೇಕು. ರೈಲು ಸಂಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸಿಐಟಿಯು ಸಂಘಟನೆಯ ಕಾರ್ಯಕರ್ತೆ ಮಂಜುಳಾ ತಿಳಿಸಿದರು. ಸಿಐಟಿಯು ನಾಯಕಿ ಆಯಿಷಾಬಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.