ADVERTISEMENT

ಸರ್ಕಾರಿ ಯೋಜನೆ ಸದುಪಯೋಗವಾಗಲಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 8:44 IST
Last Updated 4 ಸೆಪ್ಟೆಂಬರ್ 2017, 8:44 IST

ಚೇಳೂರು: ‘ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರ ಅಂಗನವಾಡಿ ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರಿಗೆ ಬಿಸಿಯೂಟ ಯೋಜನೆ ಸೇರಿದಂತೆ ಹಲವಾರು ಯೋಜನೆಗಳು ಜಾರಿಗೆ ತಂದಿದ್ದು, ಅವುಗಳನ್ನ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಶಿವಪುರ ಸರ್ಕಾರಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ರಮಾಮಣಿ ಹೇಳಿದರು.

ಸೋಮನಾಥಪುರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೌಷ್ಟಿಕ ಆಹಾರ ಶಿಬಿರದಲ್ಲಿ ಮಾತನಾಡಿದ ಅವರು, ‘ಹೆಣ್ಣು ಮಕ್ಕಳಿಗೆ 18 ವರ್ಷಗಳು ದಾಟಿದ ಬಳಿಕವಷ್ಟೇ ಮದುವೆ ಮಾಡಬೇಕು. ಬಾಲ್ಯ ವಿವಾಹ ಮಾಡುವುದು ಅಪರಾಧ, ಅದಕ್ಕೆ ಕಾನೂನಿನಲ್ಲಿ ಶಿಕ್ಷೆ ಇದೆ. ಗರ್ಭಿಣಿಯರು, ಬಾಣಂತಿಯರಿಗೆ ಯಾವುದೇ ಸಮಸ್ಯೆಗಳು ಇದ್ದಲ್ಲಿ ಮಹಿಳಾ ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತರ ಗಮನಕ್ಕೆ ತಂದು ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಸೋಮನಾಥಪುರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಎಚ್.ಆರ್.ರಾಮಚಂದ್ರಪ್ಪ ಮಾತನಾಡಿ, ‘ಈ ಭಾಗದಲ್ಲಿ ಒಂದು ಸಾವಿರ ಅಡಿ ಕೊಳವೆ ಬಾವಿ ಹಾಕಿಸಿದರು ನೀರು ಸಿಗುತ್ತಿಲ್ಲ, ಸಿಕ್ಕರೂ ಆ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದೆ. ಆದ್ದರಿಂದ ಪ್ರತಿ ಗ್ರಾಮದಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸುವ ಅಗತ್ಯವಿದೆ. ಪ್ರತಿಯೊಬ್ಬರು ಮಳೆ ನೀರು ಸಂಗ್ರಹಿಸುವ ಜತೆಗೆ ಪರಿಸರ ರಕ್ಷಣೆ ಆದ್ಯತೆ ನೀಡಬೇಕಾಗಿದೆ’ ಎಂದರು.

ADVERTISEMENT

ಆರೋಗ್ಯ ಕಾರ್ಯಕರ್ತೆ ಆಸ್ಮಾ, ಗ್ರಾಮ ಪಂಚಾಯಿತಿ ಸದಸ್ಯೆ ಜಯಮ್ಮ, ಶಿವಪುರ ಗ್ರಾಮದ ಮುಖಂಡ ಎಸ್.ಎನ್.ಬೈರಾರೆಡ್ಡಿ, ಆಶಾ ಕಾರ್ಯಕರ್ತರಾದ ಪವಿತ್ರಾ, ಸುರೇಖಾ, ತುಳಸಿ, ಕಲ್ಪನಾ, ಶಾಮಲಮ್ಮ, ಆಯೀಷಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.