ADVERTISEMENT

145 ಕ್ಯೂಬಿಕ್‌ ಮೀಟರ್‌ ಮರಳು ವಶ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 10:10 IST
Last Updated 9 ಜನವರಿ 2017, 10:10 IST

ಚಿಂತಾಮಣಿ: ‘ಆಕ್ರಮ ಮರಳು ಸಾಗಾಟ ಮತ್ತು ಮರಳು ದಂಧೆ ನಡೆಸುತ್ತಿರುವವರ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್‌ ಎಂ.ಗಂಗಪ್ಪ ತಿಳಿಸಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶುಕ್ರವಾರ ಮತ್ತು ಶನಿವಾರ  ಎರಡು ದಿನಗಳ ಕಾಲ ಚಿಲಕಲನೇರ್ಪು ಹೋಬಳಿಯಲ್ಲಿ ಆಕ್ರಮ ಮರಳು ದಾಸ್ತಾನು ಹಾಗೂ ಮರಳು ಫಿಲ್ಟರ್‌ ಅಡ್ಡೆಗಳ ಮೇಲೆ  ದಾಳಿ ನಡೆಸಲಾಗಿದೆ. ದಾಸ್ತಾನು ಮಾಡಿದ್ದ ಮರಳನ್ನು ವಶಪಡಿಸಿಕೊಂಡು ಹರಾಜು ಹಾಕಲಾಗಿದೆ’ ಎಂದು ತಿಳಿಸಿದರು.

‘ಚಿಲಕಲನೇರ್ಪು ಹೋಬಳಿಯ ಬೊಮ್ಮನಹಳ್ಳಿ ಗ್ರಾಮದ ಸರ್ವೆ ನಂ 2ರಲ್ಲಿ ಮರಳು ಗುಡ್ಡೆಗಳು ಹಾಗೂ 1 ಫಿಲ್ಟರ್‌, ಅದೇ ಗ್ರಾಮದ ವಂಗಮಾಳಲು ರಸ್ತೆಯಲ್ಲಿ 3 ಕಡೆ ದಾಳಿ ನಡೆಸಿ, ಮರಳು ಫಿಲ್ಟರ್‌ಗಳನ್ನು ನಾಶ ಪಡಿಸಿ  8 ಲಾರಿಗಳಷ್ಟು ಮರಳು ವಶಪಡಿಸಿಕೊಂಡಿರುವುದಾಗಿ’ ತಿಳಿಸಿದ್ದರು.

‘ವಶಪಡಿಸಿಕೊಂಡಿದ್ದ 145.11 ಕ್ಯೂಬಿಕ್‌ ಮೀಟರ್‌ ಮರಳನ್ನು ಬಹಿರಂಗ ಹರಾಜಿಲ್ಲಿ ₹ 1.65 ಲಕ್ಷಕ್ಕೆ ಮಾರಾಟ ಮಾಡಿ ಹಣವನ್ನು ಸರ್ಕಾರಿ ಖಜಾನೆಗೆ ತುಂಬಿಸಲಾಗಿದೆ’  ಎಂದು ತಿಳಿಸಿದರು.

‘ಮರಳು ಆಕ್ರಮ ದಾಸ್ತಾನು ಹಾಗೂ ಅಕ್ರಮ ಮಾರಾಟದ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಶಿವಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರಾಮ್‌ಜಿ ನಾಯಕ್‌ ಹಾಗೂ ತಹಶೀಲ್ದಾರ್‌ ನೇತೃತ್ವದಲ್ಲಿ 3 ತಂಡಗಳು ಪೊಲೀಸರ ನೆರವಿನೊಂದಿಗೆ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ’ ಎಂದು ತಿಳಿಸಿದರು.
ಎಪಿಎಂಸಿ ಚುನಾವಣಾ ಸಿದ್ಧತೆ: ಜನವರಿ 12 ರಂದು ನಡೆಯಲಿರುವ ಎಪಿಎಂಸಿ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ತಾಲ್ಲೂಕಿನಲ್ಲಿ 72 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಸೂಕ್ಷ್ಮ ಮತಗಟ್ಟೆಗಳು 20, ಅತಿಸೂಕ್ಷ್ಮ ಮತಗಟ್ಟೆಗಳು 44, ಸಾಮಾನ್ಯ ಮತಗಟ್ಟೆಗಳು 8 ಎಂದು ವಿಂಗಡಿಸಲಾಗಿದೆ. ಪ್ರತಿ ಮತಗಟ್ಟೆಗೆ 5 ಜನ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. 38185 ಪುರುಷರು ಹಾಗೂ 9301 ಮಹಿಳೆಯರು ಸೇರಿ ಒಟ್ಟು 47486 ಮತದಾರರಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.