ADVERTISEMENT

ಆಹಾರ ನಿರೀಕ್ಷಕರಿಗೆ ಕೊಲೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:36 IST
Last Updated 19 ಮೇ 2017, 5:36 IST

ಕಡೂರು: ನ್ಯಾಯಬೆಲೆ ಅಂಗಡಿ ವಿಷಯ ಸಂಬಂಧ ಕರ್ತವ್ಯ ನಿರ್ವಹಿಸುತ್ತಿದ್ದ ಆಹಾರ ನಿರೀಕ್ಷಕ ಡಿ.ಎಸ್. ರಂಗನಾಥ್ ಅವರಿಗೆ ತಾಲ್ಲೂಕಿನ ಎಸ್.ಕೊಪ್ಪಲಿನಲ್ಲಿ ಗುರುವಾರ ಪಡಿತರ ಅಂಗಡಿಯ ಮಾಲೀಕರು ಕೊಲೆ ಬೆದರಿಕೆ ಹಾಕಿದ್ದಾರೆ.

ಸಖರಾಯಪಟ್ಟಣ ಹೋಬಳಿಯ ಎಸ್.ಕೊಪ್ಪಲು ಗ್ರಾಮದ ನ್ಯಾಯ ಬೆಲೆ ಅಂಗಡಿ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದರಿಂದ ನ್ಯಾಯಬೆಲೆ ಅಂಗಡಿಯನ್ನು ಅಮಾನತು ಮಾಡು ವಂತೆ ಏಪ್ರಿಲ್‌ 14ರಂದು ತಾಲ್ಲೂಕು ದಂಡಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು.

ಇದರಿಂದ ಜಿಲ್ಲಾಧಿಕಾರಿಗಳು ಮೇ. 9ರಂದು ನ್ಯಾಯಬೆಲೆ ಅಂಗಡಿ ಯನ್ನು ಅಮಾನತುಗೊಳಿಸಿ ದ್ದರು. ಸಹದ್ಯೋಗಿ ಅಹಾರ ನಿರೀಕ್ಷಕರಾದ ಜಿ.ತಿಮ್ಮಯ್ಯ  ಆಹಾರ ಇಲಾಖೆಯ ಉಪನಿರ್ದೇಶಕರ ಆದೇಶದಂತೆ ಇದೇ 4 ರಂದು ನ್ಯಾಯಬೆಲೆ ಅಂಗಡಿಯ ಮಳಿಗೆಗೆ ಬೀಗ ಹಾಕಿಕೊಂಡು ಬಂದಿ ದ್ದಾರೆ. ಆದರೂ ನ್ಯಾಯಬೆಲೆ ಅಂಗಡಿಯ ಮಾಲೀಕ ಬಸವರಾಜ್ ಕಡೂರು ಕೆ.ಎಫ್.ಸಿ.ಎಸ್.ಸಿ ಗೋದಾಮಿನಿಂದ ಇದೇ 4ರಂದು ಪಡಿತರ ಪದಾರ್ಥಗಳನ್ನು ತೆಗೆದು ಕೊಂಡು ಮತ್ತೆ ತನ್ನ ನ್ಯಾಯಬೆಲೆ ಅಂಗಡಿಯಲ್ಲಿ ಶೇಖರಣೆ ಮಾಡಿದ್ದು, ಶೇಖರಣೆಯಾದ ಪದಾರ್ಥಗಳನ್ನು ಪರ್ಯಾಯ ವ್ಯವಸ್ಥೆಯ ಮೂಲಕ ಪಡಿತರ ಕಾರ್ಡುದಾರರಿಗೆ ವಿತರಿಸು ವಂತೆ ತಹಶೀಲ್ದಾರ್ ಸೂಚಿಸಿದ್ದಾರೆ.

ADVERTISEMENT

ತಹಶೀಲ್ದಾರ್ ಸೂಚನೆಯ ಮೇರೆಗೆ ಆಹಾರ ನಿರೀಕ್ಷಕ ರಂಗನಾಥ್ ಮತ್ತು ನಿಯೋಜಿತ ಆಹಾರ ಶಿರಸ್ಥೇದಾರ್ ಎಂ.ವಿ. ಚಂದ್ರಮೂರ್ತಿ ಮತ್ತು ಕಚೇರಿ ಸಹಾಯಕರಾದ ಲೋಕೇಶ್, ಸತೀಶ್ ಇವರೊಂದಿಗೆ ಗುರುವಾರ ಅಮಾನತು ಗೊಂಡಿರುವ ನ್ಯಾಯಬೆಲೆ ಅಂಗಡಿಗೆ ತೆರಳಿ ಪರ್ಯಾಯ ವ್ಯವಸ್ಥೆ ಮಾಡುವ ಸಂದರ್ಭದಲ್ಲಿ ಮಾಲೀಕ ಬಸವರಾಜ್ ಮತ್ತು ಆತನ ಸಂಗಡಿಗರು ರಂಗನಾಥ್ ಅವರನ್ನು ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.

ಆಹಾರ ನಿರೀಕ್ಷಕ ರಂಗನಾಥ್ ಕಡೂರು ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದು, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ.ತಿಪ್ಪೇಶ್  ಅವರು ಕಡೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ಸತ್ಯನಾರಾಯಣ್ ಅವರಿಗೆ ಈ ಕುರಿತು ದೂರು ಸಲ್ಲಿಸಿದ್ದಾರೆ.

ತಿಪ್ಪೇಶ್ ಮಾತನಾಡಿ ‘ಪದೇ ಪದೇ ಸರ್ಕಾರಿ ನೌಕರರ ಮೇಲೆ ಬೆದರಿಕೆ ಹಲ್ಲೆ  ನಡೆಯುತ್ತಿದ್ದು, ಕೂಡಲೇ ಬೆದರಿಕೆ ಹಾಕಿದವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.