ಶೃಂಗೇರಿ: ‘ಇಂದಿನ ಜೀವನ ಶೈಲಿಯಲ್ಲಿ ಹೋರಾಟದ ನಡುವೆ ಜನರಿಗೆ ನೆಮ್ಮದಿ ಸಿಗುತ್ತಿಲ್ಲ. ನಮ್ಮ ಬಳಿ ಎಲ್ಲವೂ ಇವೆ. ಆದರೆ, ಶಾಂತಿ, ಮಾನಸಿಕ ನೆಮ್ಮದಿ ಮರೆಯಾಗಿದೆ’ ಎಂದು ಶಾರದ ಮಠದ ಅಧಿಕಾರಿ ಶ್ರೀಪಾದರಾವ್ ಆತಂಕ ವ್ಯಕ್ತಪಡಿಸಿದರು.
ಶೃಂಗೇರಿ ತಾಲ್ಲೂಕಿನ ವಿದ್ಯಾರಣ್ಯಪುರದ ಶಾಂತಿನಿಕೇತನ ಆಶ್ರಮದಲ್ಲಿ ಗುರುವಾರ ಜೆಸಿಐ ಸಂಸ್ಥೆ ಮುಸ್ಸಂಜೆ ಮಾತು ಎಂಬ ಶೀರ್ಷಿಕೆಯಡಿಯಲ್ಲಿ ಬುಧವಾರ ಏರ್ಪಡಿಸಿದ್ದ ‘ಭಾವೈಕ್ಯ ನೆಲೆಗಟ್ಟಿನಲ್ಲಿ ಮಾನಸಿಕ ನೆಮ್ಮದಿಗಾಗಿ ತರಬೇತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜೀವನದ ಮೌಲ್ಯಗಳನ್ನು ಅರಿಯಲು ಮಂಕು ತಿಮ್ಮನ ಕಗ್ಗದಂತಹ ಸಾಹಿತ್ಯವನ್ನು ಆಶ್ರಯಿಸಬೇಕು. ಡಿ.ವಿ.ಜಿ ಅವರ ಮಂಕು ತಿಮ್ಮನ ಕಗ್ಗವು ಬದುಕಿನ ಸಾರ್ಥಕ್ಯತೆಯನ್ನು ಎತ್ತಿಹಿಡಿಯುತ್ತದೆ. ಜೀವನ ಸಾಗಿಸುವ ಹಾದಿಯಲ್ಲಿ ನಾವು ಅನುಸರಿಸಬೇಕಾದ ಮೌಲ್ಯಗಳನ್ನು ಕಗ್ಗದಲ್ಲಿ ನಾವು ಕಾಣಬಹುದು’ ಎಂದರು.
ತೊರೆಹಡ್ಲು ಶಿಕ್ಷಕ ಎಸ್.ಗುರುಮೂರ್ತಿ ಮಾತನಾಡಿ, ‘ಬದುಕು ಎಂಬುದು ಮೂರು ಅಕ್ಷರದ ಪದ. ಹಾಗಾಗಿ, ಮಾನವ ಜನ್ಮ ಎಂಬುದು ಮೂರು ದಿನಗಳ ಕಾಲ ಇರುವಂತಹದು ಎಂಬ ಪಾರಮಾರ್ಥಿಕ ಅರಿವು ನಮ್ಮಲ್ಲಿರಬೇಕು. ಸಾರ್ಥ ಜೀವನದಲ್ಲಿ ನಾವು ಮಾನವೀಯ ಮೌಲ್ಯಗಳನ್ನು ಮರೆತು ಎತ್ತಲೋ ಗುರಿಯಿಲ್ಲದೆ ಸಾಗುತ್ತಿದ್ದೇವೆ’ ಎಂದು ಹೇಳಿದರು.
‘ಜೀವನದಲ್ಲಿ ನಾವು ಸಾಯುವ ತನಕ ಕಲಿಯುವುದು ಬೇಕಾದಷ್ಟಿದೆ. ಅಸೂಯೆ, ಕಲಹ ನಮ್ಮನ್ನು ಸರ್ವನಾಶ ಮಾಡುತ್ತದೆ. ಅವುಗಳನ್ನು ತ್ಯಜಿಸಿ ಪರೋಪಕಾರ, ಕರುಣೆ, ಸಹಾನುಭೂತಿ, ಪ್ರಿಯವಾದ ಮಾತುಗಾರಿಕೆ ಇತ್ಯಾದಿ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ನಡೆ, ನುಡಿಯಲ್ಲಿ ಆದರ್ಶನೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಅರ್ಥಪೂರ್ಣವಾಗಿ ಬದುಕು ಸಾಧಿಸಬೇಕು’ ಎಂದರು. ಅಧ್ಯಕ್ಷತೆಯನ್ನು ಜೆಸಿಐ ಸಂಸ್ಥೆ ಅಧ್ಯಕ್ಷ ಕೆ.ಟಿ.ಮಂಜುನಾಥ್, ಪದಾಧಿಕಾರಿಗಳಾದ ಸಂದೇಶ್, ರಾಘವೇಂದ್ರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.