ADVERTISEMENT

ಒಬ್ನೇ ಮಗನ ಕಳ್ಕೊಂಡು ಹೇಗೆ ಬದುಕಿರ್ಲಿ...

ವಿಷಾಹಾರ ಸೇವನೆ: ಮೃತ ವಿದ್ಯಾರ್ಥಿ ಪೋಷಕರ ರೋದನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 5:29 IST
Last Updated 11 ಮಾರ್ಚ್ 2017, 5:29 IST
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ವಿದ್ಯಾವಾರಿಧಿ ಇಂಟರ್‌ನ್ಯಾಷನಲ್‌ ವಸತಿ ಶಾಲೆಯಲ್ಲಿ ವಿಷಾಹಾರ ಸೇವನೆಯಿಂದ ಮೃತಪಟ್ಟ ವಿದ್ಯಾರ್ಥಿ ಶಾಂತಮೂರ್ತಿಯ ಪೋಷಕರು ಹಾಗೂ ಸಂಬಂಧಿಕರು ಹೊಸದುರ್ಗ ತಾಲ್ಲೂಕಿನ ಆನಿವಾಳದಲ್ಲಿ ಶೋಕ ಸಾಗರದಲ್ಲಿ ಮುಳುಗಿರುವುದು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ವಿದ್ಯಾವಾರಿಧಿ ಇಂಟರ್‌ನ್ಯಾಷನಲ್‌ ವಸತಿ ಶಾಲೆಯಲ್ಲಿ ವಿಷಾಹಾರ ಸೇವನೆಯಿಂದ ಮೃತಪಟ್ಟ ವಿದ್ಯಾರ್ಥಿ ಶಾಂತಮೂರ್ತಿಯ ಪೋಷಕರು ಹಾಗೂ ಸಂಬಂಧಿಕರು ಹೊಸದುರ್ಗ ತಾಲ್ಲೂಕಿನ ಆನಿವಾಳದಲ್ಲಿ ಶೋಕ ಸಾಗರದಲ್ಲಿ ಮುಳುಗಿರುವುದು.   
ಹೊಸದುರ್ಗ: ‘ಅಯ್ಯೋ! ಶಿವನೇ, ಮುದ್ದಾಗಿ ಸಾಕಿದ್ದ ಒಬ್ನೇ ಮಗನನ್ನು ಮಣ್ಣಿಗೆ ಇಡೋ ಸ್ಥಿತಿ ಏಕೆ ಕೊಟ್ಟೆ? ಇದ್ದ ಒಬ್ಬ ಮಗನನ್ನ ಕಳ್ಕೊಂಡು ನಾನ್‌ ಹೇಗೆ ಬದುಕಿರ್ಲಿ...’
 
ಚಿಕ್ಕನಾಯಕನಹಳ್ಳಿ ತಾಲ್ಲೂಕಿ ಹುಳಿ ಯಾರಿನ ವಿದ್ಯಾವಾರಿಧಿ ಇಂಟರ್‌ ನ್ಯಾಷನಲ್‌ ವಸತಿ ಶಾಲೆಯಲ್ಲಿ ವಿಷಾಹಾರ ಸೇವನೆಯಿಂದ ಮೃತಪಟ್ಟ ತಾಲ್ಲೂಕಿನ ಶ್ರೀರಾಂಪುರದ 10ನೇ ತರಗತಿ ವಿದ್ಯಾರ್ಥಿ ಶಾಂತಮೂರ್ತಿ (15) ಅವರ ತಾಯಿ ಆರ್‌. ಭಾಗ್ಯ ಹಾಗೂ ತಂದೆ ಕೊಟ್ರೇಶ್‌ ರೋದಿಸುತ್ತಿದ್ದ ದೃಶ್ಯ  ಮನ ಕಲುಕುವಂತಿತ್ತು. 
 
ಭಾಗ್ಯ ಅವರ ತವರೂರಾದ ತಾಲ್ಲೂಕಿನ ಆನಿವಾಳ ಗ್ರಾಮದಲ್ಲಿ ಶಾಂತಮೂರ್ತಿಯ ಅಂತ್ಯಸಂಸ್ಕಾರವು ಗುರುವಾರ ಸಂಜೆ ಅಪಾರ ಜನಸ್ತೋಮದ ನಡುವೆ ನೆರವೇರಿತು. ಒಬ್ಬನೇ ಮಗನನ್ನು ಕಳೆದುಕೊಂಡ ಆಘಾತದಿಂದ ಪೋಷಕರು ಶುಕ್ರವಾರವೂ ಚೇತರಿಸಿಕೊಂಡಿಲ್ಲ. 
 
‘ಲಾರಿ ಚಾಲಕರಾಗಿದ್ದ ಕೊಟ್ರೇಶ್‌ ದುಡಿದ ಹಣದಲ್ಲಿ ಬಹುತೇಕ ಪಾಲನ್ನು ಮಗನ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಿದ್ದ. ವಸತಿ ಶಾಲೆಯಲ್ಲಿ ನೆಲೆಸಿ ಓದುವ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲಿ ಎಂದು ಆಶಿಸಿದ್ದ. ಎಂಜಿನಿಯರಿಂಗ್‌ ಅಥವಾ ವೈದ್ಯಕೀಯ ಶಿಕ್ಷಣ ಪಡೆದು, ವೃದ್ಧಾಪ್ಯದಲ್ಲಿ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ಕನಸನ್ನು ಕಂಡಿದ್ದ.
 
ಆದರೆ, ವಸತಿ ಶಾಲೆಯವರು ವಿಷಾಹಾರ ನೀಡಿ ಬಲಿ ತೆಗೆದುಕೊಂಡರು’ ಎಂದು ಹೇಳುವಾಗ ಶಾಂತಮೂರ್ತಿಯ ಅಜ್ಜ ರುದ್ರಪ್ಪ ಅವರ ಕಣ್ಣಾಲಿಗಳು ಒದ್ದೆಯಾದವು.  ವಸತಿ ಶಾಲೆಯವರು ಆಹಾರದ ಸುರಕ್ಷತೆ ಬಗ್ಗೆ ನಿಗಾ ವಹಿಸಬೇಕು. ವಸತಿ ನಿಲಯ ದಲ್ಲಿ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾದರೂ ತಕ್ಷಣವೇ ಪೋಷಕರಿಗೆ ಮಾಹಿತಿ ನೀಡಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.