ADVERTISEMENT

ಜಾನುವಾರು ಮೇವು ಮಾರಿಕೊಳ್ಳದಿರಿ: ಮುರುಘಾ ಶ್ರೀ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 5:28 IST
Last Updated 21 ಏಪ್ರಿಲ್ 2017, 5:28 IST

ಚಿತ್ರದುರ್ಗ: ಸಮೀಪದ ಸೀಬಾರ ಗ್ರಾಮದ ದನಗಳ ಜಾತ್ರೆ ನಡೆಯುವ ಮೈದಾನದಲ್ಲಿ ಗುರುವಾರ ತಾಲ್ಲೂಕು ಆಡಳಿತದಿಂದ ಆರಂಭಿಸಿದ ‘ಮೇವು ಬ್ಯಾಂಕ್‌’ಗೆ ಮುರುಘಾಮಠದ ಶಿವಮೂರ್ತಿ ಶರಣರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸೀಬಾರ ಸುತ್ತಲಿನ ಗ್ರಾಮಸ್ಥರು ಜಾನುವಾರುಗಳಿಗೆ ಮೇವು ಅಗತ್ಯವಾಗಿದೆ. ಮಠದಿಂದ ಏನಾದರೂ ವ್ಯವಸ್ಥೆ ಮಾಡಿ’ ಎಂದು ಮನವಿ ಮಾಡಿದ್ದರು. ಈ ಸಂಬಂಧ ತಹಶೀಲ್ದಾರ್ ಮಲ್ಲಿಕಾರ್ಜುನಪ್ಪ, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರೊಂದಿಗೆ ಮೇವು ವಿತರಣೆ ಕುರಿತು ಚರ್ಚೆ ಮಾಡಿದ್ದೆವು. ನಮ್ಮ ಮನವಿಗೆ ಒಪ್ಪಿ ತಾಲ್ಲೂಕು ಆಡಳಿತ ‘ಮೇವು ಬ್ಯಾಂಕ್’ ಸ್ಥಾಪಿಸಿದೆ. ಶಾಸಕರು ಮತ್ತು ತಹಶೀಲ್ದಾರು ಹಾಗೂ ಈ ಭಾಗದ ಎಲ್ಲ ಜನಪ್ರತಿನಿಧಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

‘ಹಿಂದೆದೂ ಕಾಣದಂತಹ ಬರಗಾಲ ಬಂದಿದೆ. ನೀರಿನ ಹಾಹಾಕಾರ ಹೆಚ್ಚಾಗಿದೆ. ಎಲ್ಲಿಯೂ ಮೇವಿಲ್ಲ. ಜಾನುವಾರುಗಳು ಸಂಕಷ್ಟದಲ್ಲಿವೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಸ್ಪಂದಿಸಬೇಕಾದದ್ದು ನಮ್ಮ ಧರ್ಮ. ಹಾಗಾಗಿ ಈ ಜಾತ್ರೆ ನಡೆಯುವ ಸ್ಥಳವನ್ನೇ ಮೇವು ಬ್ಯಾಂಕ್‌ಗಾಗಿ ಬಿಟ್ಟುಕೊಟ್ಟಿದ್ದೇವೆ. ಈ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ಯಾರಿಗೆ ಎಷ್ಟು ಮೇವು ಅಗತ್ಯವಿದೆಯೋ, ಅಷ್ಟನ್ನು ಮಾತ್ರ ಖರೀದಿಸಿ, ಬಳಸಿ’ ಎಂದು ಕಿವಿಮಾತು ಹೇಳಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ‘ಮೇವಿನ ಕೊರತೆಯಿದೆ. ಇಲ್ಲಿಗೆ ಮೇವು ಪೂರೈಕೆಗಾಗಿ ಗುತ್ತಿಗೆ ನೀಡಿದ್ದ ವ್ಯಕ್ತಿ ಕೈಕೊಟ್ಟಿದ್ದಾನೆ. ಆದರೂ ತಹಶೀಲ್ದಾರ್ ಮಲ್ಲಿಕಾರ್ಜುನ್, ದೂರದ ಯಾದಗಿರಿಯಿಂದ ಮೇವು ತರಿಸಿ ವಿತರಿಸುತ್ತಿದ್ದಾರೆ. ಅವರ ಶ್ರಮ ನಿಜಕ್ಕೂ ಅಭಿನಂದನೀಯ’ ಎಂದರುತಹಶೀಲ್ದಾರ್ ಮಲ್ಲಿಕಾರ್ಜುನಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ನರಸಿಂಹರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಠದಕುರುಬರಹಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆನಂದ್, ತಾಲ್ಲೂಕು ಪಂಚಾಯ್ತಿ ಸದಸ್ಯ ಪರಮೇಶ್, ಸೀಬಾರ ಗ್ರಾಮದ ಪ್ರಕಾಶ್, ಕಲ್ಲೇಶಯ್ಯ, ಎಸ್‌.ಎನ್‌.ಸ್ಮಾರಕಟ್ರಸ್ಟ್‌ನ ಕೆಇಬಿ ಷಣ್ಮುಖಪ್ಪ, ಮುರುಘಾಮಠದ ವ್ಯವಸ್ಥಾಪಕ ಎ.ಜೆ.ಪರಮಶಿವಯ್ಯ, ಎಂ.ಜಿ. ದೊರೆಸ್ವಾಮಿ, ಷಡಾಕ್ಷರಯ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.