ADVERTISEMENT

ತೊಗರಿಗೆ ಕಾಯಿಕೊರಕ ರೋಗ: ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 9:18 IST
Last Updated 27 ಡಿಸೆಂಬರ್ 2017, 9:18 IST
ಪರಶುರಾಂಪುರ ಹೋಬಳಿಯಲ್ಲಿ ಸಮೃದ್ಧವಾಗಿ ಬೆಳೆದಿರುವ ತೊಗರಿ ಬೆಳೆ
ಪರಶುರಾಂಪುರ ಹೋಬಳಿಯಲ್ಲಿ ಸಮೃದ್ಧವಾಗಿ ಬೆಳೆದಿರುವ ತೊಗರಿ ಬೆಳೆ   

ಪರಶುರಾಂಪುರ: ಹೋಬಳಿಯ 2,262 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದ್ದು, ಕಾಯಿಕೊರಕ ಬಾಧೆ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಇದು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರನ್ನು ಕಂಗೆಡಿಸಿದೆ.

ಕಾಯಿಕೊರಕ ರೋಗಬಾಧೆ ಅಲ್ಲದೇ ಅತಿಯಾಗಿ ಬಿಳುತ್ತಿರುವ ಮಂಜು ಸಹ ತೊಗರಿ ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ. ನಿರೀಕ್ಷಿಸಿದಷ್ಟು ಫಸಲು ಸಿಗದ ಸ್ಥಿತಿ ನಿರ್ಮಾಣವಾಗಿದೆ.

ಹೊಲಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹಸಿರು, ಕಂದು ಮಿಶ್ರಿತ ಕೀಟಗಳು, ಕಾಯಿ ಕಟ್ಟುವ ಹಂತದಲ್ಲಿರುವ ತೊಗರಿಯನ್ನು ತಿಂದು ನಾಶ ಮಾಡುತ್ತಿವೆ. ಈ ಬಾರಿ ಮಳೆ ಸ್ವಲ್ಪ ಹೆಚ್ಚಾಗಿ ಬಂದಿರುವುದರಿಂದ ಮತ್ತು ಮಂಜು ಹೆಚ್ಚಾಗಿ ಬೀಳುತ್ತಿರುವುದರಿಂದ ತೇವಾಂಶ ಜಾಸ್ತಿಯಾಗಿದೆ. ಇದರಿಂದ ಹೂವುಗಳು ಉದುರುತ್ತಿವೆ.

ADVERTISEMENT

ಸದೃಡವಾಗಿ ಬೆಳೆದು ನಿಂತಿದಿದ್ದ ತೊಗರಿ ಕಾಯಿಗಳು ಕಾಯಿಕೊರಕ ಬಾಧೆ, ಮಂಜು ಮುಸುಕಿದ ವಾತಾವರಣದಿಂದ ಒಣಗುತ್ತಿವೆ. ತೊಗರಿಯಿಂದ ಸಿಗುವ ಅಲ್ಪ ಆದಾಯ ದಲ್ಲಿಯೇ ಜೀವನ ನಡೆಸಬಹುದು ಎಂಬ ರೈತರ ಕನಸಿಗೆ ತಣ್ಣೀರು ಎರಚಿದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ತೊಗರಿ ಪ್ರಮುಖ ಬೆಳೆ ಕಾಳು ಉತ್ಪನ್ನ. ಮಳೆಯಾಶ್ರಿತ, ಒಣ ಬೇಸಾಯ ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆ. ಎಳೆಯದಿರುವಾಗ ತೊಗರಿಕಾಯಿ ತರಕಾರಿಯಾಗಿ, ನಂತರ ಕಾಳು ಹಾಗೂ ಬೆಳೆ ರೂಪದಲ್ಲಿ ಉಪಯೋಗಕ್ಕೆ ಬರುತ್ತದೆ. ತೊಗರಿ ಗಿಡದ ಎಲೆಗಳು ಪಶುಗಳಿಗೆ ಆಹಾರವಾಗಿ, ತೊಗರಿ ಗಿಡ, ಕಟ್ಟಿಗೆಯನ್ನು ಉರುವಲಾಗಿ ರೈತರು ಉಪಯೋಗಿಸುತ್ತಾರೆ.

* * 

ತೊಗರಿ ಬೆಳೆಗೆ ಕಾಯಿಕೊರಕ ರೋಗ ಉಂಟಾಗಿದೆ ಈಗಾಗಲೇ ಬೆಂಗಳೂರಿನ ಜಿ.ಕೆ.ವಿ.ಕೆ ಯಿಂದ ವಿಜ್ಞಾನಗಳು ಬಂದು ತೊಗರಿ ಬೆಳೆಗಳ ವಿಕ್ಷಣೆ ಮಾಡಿ ಹೊಗಿದ್ದಾರೆ ಅವರು ವರದಿ ನೀಡಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಮಾರುತಿ,
ಸಹಾಯಕ ಕೃಷಿ ನಿರ್ದೇಶಕರು ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.