ಪರಶುರಾಂಪುರ: ಹೋಬಳಿ ವ್ಯಾಪ್ತಿಯ ತೊರೆಬೀರನಹಳ್ಳಿ ಬ್ಲಾಕ್ ಬಳಿ ವೇದಾವತಿ ನದಿಯಲ್ಲಿ ಮರಳು ತೆಗೆಯುವುದನ್ನು ವಿರೋಧಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
‘ತೊರೆಬೀರನಹಳ್ಳಿ ಬ್ಲಾಕ್ನ 20 ಎಕೆರೆಯಲ್ಲಿ ಮರಳು ತೆಗೆಯುತ್ತಿರುವುದರಿಂದ ಕೃಷಿ ಭೂಮಿಗೆ ತೊಂದರೆಯಾಗಿದ್ದು, ರೈತರ ಜಮೀನುಗಳಿಗೆ ನೀರಿನ ಕೊರತೆಯಾಗುತ್ತಿದೆ. ಅಂತರ್ಜಲ ಕುಸಿದು ರೈತರು ಈಗಾಗಲೇ ನಾಟಿ ಮಾಡಿರುವ ಬೆಳೆಗಳಿಗೆ ನೀರಿನ ಕೊರತೆಯಾಗುತ್ತದೆ. ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಯಾವುದೇ ರೀತಿಯ ಪೊಲೀಸರ ರಕ್ಷಣೆಯಲ್ಲಿ ಗುತ್ತಿಗೆದಾರರು ಮರಳು ತೆಗೆಯುತ್ತೇವೆ ಎಂಬ ಆಸೆಯನ್ನು ಬೀಡಬೇಕು. ಮಹಿಳೆಯರು ಸೇರಿದಂತೆ ಸಾಮೂಹಿಕವಾಗಿ ನದಿ ದಡದಲ್ಲಿ ಪ್ರತಿಭಟನೆ ಮಾಡಲಾಗುವುದು’ ಎಂದು ತೊರೆಬೀರನಹಳ್ಳಿ ರೈತ ಮಾರುತೇಶ ತಿಳಿಸಿದರು. ಎಂದು ಪ್ರತಿಭಟನಾಕಾರರು ಹೇಳಿದರು.
‘ಪರವಾನಗಿ ಪಡೆದಿದ್ದೇವೆ ಎಂದು ಗುತ್ತಿಗೆದಾರರು ಮರಳನ್ನು ತೆಗೆದು ನಮಗೆ ಕುಡಿಯಲು ನೀರು ಸೀಗದಂತಹ ಪರಿಸ್ಥಿತಿ ನಿರ್ಮಾಣ ಮಾಡಲು ಮುಂದಾಗಿದ್ದು, ದೇಶಕ್ಕೆ ಅನ್ನ ನೀಡುವ ರೈತನಿಗೆ ಮೊದಲು ರಕ್ಷಣೆಕೊಡಬೇಕು. ಆದರೆ ಗುತ್ತಿಗೆದಾರರಿಗೆ ಅಧಿಕಾರಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ. ರೈತರ ಪರ ಯಾವ ಅಧಿಕಾರಿಗಳು ಸಹ ಮಾತನಾಡುವುದಿಲ್ಲ’ ಎಂದು ನಾರಯಣಪುರ ಗ್ರಾಮದ ರೈತ ಶ್ರೀನಿವಾಸ ಕಳವಳ ವ್ಯಕ್ತಪಡಿಸಿದರು.
‘ಗುತ್ತಿಗೆದಾರರಿಗೆ 5 ವರ್ಷದವರೆಗೆ ಅವಕಾಶ ನೀಡಿದ್ದು, ಈ ಭಾಗದಲ್ಲಿ ಸಂಪೂರ್ಣವಾಗಿ ಮರಳನ್ನು ಖಾಲಿ ಮಾಡಿ ರೈತರ ಬಾಯಿಗೆ ಮಣ್ಣು ಹಾಕುವ ಕೆಲಸ ನಡೆಯುತ್ತಿದೆ. ರಕ್ತ ಬೇಕಾದರೂ ಕೊಡುತ್ತೇವೆ, ಆದರೆ ಇಲ್ಲಿ ಮರಳನ್ನು ಮಾರಾಟ ಮಾಡಲು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಗೋಪಾಲಕೃಷ್ಣ, ರಂಗಸ್ವಾಮಿ, ನಾಗರಾಜ, ಮಾರುತೇಶ, ದೇವರಾಜ, ಹನುಮಂತರಾಯ, ದ್ಯಾಮಣ್ಣ, ರಾಮಕೃಷ್ಣ, ದುರುಗಪ್ಪ, ಅನಿತ, ರಾಧ, ಯಲ್ಲಮ್ಮ, ಮನೋಹರ, ರಾಮಚಂದ್ರಪ್ಪ, ಮಧು, ನಿರಂಜನ ಬಾಬು, ಇತತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.