ADVERTISEMENT

ಜ್ಞಾನ ದೇಗುಲಕ್ಕೆ ಶತಕದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 9:13 IST
Last Updated 16 ಸೆಪ್ಟೆಂಬರ್ 2017, 9:13 IST
ಶತಮಾನೋತ್ಸವ ಸಂಭ್ರಮದಲ್ಲಿರುವ ಪೆರುವಾಯಿ ಅನುದಾನಿತ ಶಾಲೆ
ಶತಮಾನೋತ್ಸವ ಸಂಭ್ರಮದಲ್ಲಿರುವ ಪೆರುವಾಯಿ ಅನುದಾನಿತ ಶಾಲೆ   

ವಿಟ್ಲ: ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಅನುಮತಿ ಪಡೆದು, ಹಲವು ಸಾಧಕ ರನ್ನು ಸಮಾಜಕ್ಕೆ ಅರ್ಪಣೆ ಮಾಡಿರುವ ಪೆರುವಾಯಿ ಕೊಲ್ಲತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು ಶತಮಾ ನೋತ್ಸವದ ಸಂಭ್ರಮದಲ್ಲಿದೆ.

ಗ್ರಾಮೀಣ ಭಾಗವಾಗಿರುವ ವಿಟ್ಲ-ಮಾಣಿಲ ರಸ್ತೆಯ ಪೆರುವಾಯಿ ಕೊಲ್ಲ ತ್ತಡ್ಕ ಎಂಬಲ್ಲಿ 1917ರಲ್ಲಿ ಶಾಲೆಯೂ ಸ್ಥಾಪನೆಗೊಂಡಿತ್ತು. ಮೊದಲಿಗೆ ಇಲ್ಲಿ 1ರಿಂದ 5ನೇ ತರಗತಿವರೆಗೆ ಬೋಧನೆ ಮಾಡಲಾಗುತ್ತಿತ್ತು. ಬಳಿಕ 1ರಿಂದ 7ನೇ ತರಗತಿ ವರೆಗೆ ವಿಸ್ತರಣೆ ಮಾಡಲಾಗಿದೆ. ಸದ್ಯಕ್ಕೆ ನಾಲ್ವರು ಶಿಕ್ಷಕರು ಹಾಗೂ 124 ವಿದ್ಯಾರ್ಥಿಗಳು ಇದ್ದಾರೆ.

ಪೆರುವಾಯಿ ಗ್ರಾಮದ 10 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿ ಗಳು, ಇಲ್ಲಿಯೇ ವಿದ್ಯಾರ್ಜನೆ ಮಾಡಿ ಇಂದು ಅಮೆರಿಕ, ಶಾರ್ಜಾ, ಸೌದಿ ಅರೇಬಿಯಾ ಮೊದಲಾದ ಕಡೆಗಳಲ್ಲಿ ಉದ್ಯೋಗದಲ್ಲಿದ್ದಾರೆ. ಇದೊಂದು ಗ್ರಾಮೀಣ ಭಾಗವಾಗಿದ್ದು, ಸ್ವಲ್ಪ ಅಂತರದಲ್ಲಿ ಕೇರಳ-ಕರ್ನಾಟಕ ಗಡಿ ಭಾಗವಾಗಿದೆ.

ADVERTISEMENT

3 ಎಕರೆ ಜಾಗದಲ್ಲಿ ಶಾಲಾ ಮೈದಾನ, ಶಾಲೆಯ ಸುತ್ತಲೂ ವಿವಿಧ ತರಕಾರಿಗಳಾದ ತೊಂಡೆಕಾಯಿ, ಬಸಳೆ ಹಾಗೂ ತೆಂಗಿನ ಮರಗಳನ್ನು ಬೆಳೆಸಲಾಗುತ್ತಿದೆ. ಇದರಿಂದಲೇ ಮಧ್ಯಾಹ್ನ ಬಿಸಿಯೂಟಕ್ಕೆ ಉಪಯೋಗ ಮಾಡಲಾಗುತ್ತಿದೆ.

ಪ್ರತಿವರ್ಷವೂ ಶಾಲೆಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತುಳುನಾಡಿನ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಆಟಿದ ಕೂಟ, ಕೆಸರ್‌ಡೊಂಜಿ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನೀರು ಉಳಿಸುವ ಉದ್ದೇಶದಿಂದ ಶಾಲೆಯ ಸಮೀಪವೇ ಇಂಗು ಗುಂಡಿ ಮಾಡಲಾಗಿದ್ದು, ಇದರಿಂದಲೇ ಶಾಲೆಗೆ ನೀರು ಸರಬರಾಜು ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ಕೂಡ ನೀಡಲಾಗುತ್ತಿದೆ.

ಇಲ್ಲಿ ಅಕ್ಷರ ದಾಸೋಹ ಹಾಗೂ ಶೌಚಾಲಯ ಕಟ್ಟಡ ಹೊರತುಪಡಿಸಿ, ಬೇರೆ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಹಳೆಕಾಲದ ಹೆಂಚು ಹಾಗೂ ಗೋಡೆಯ ಮಧ್ಯದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅದರ ಜತೆಗೆ ಮತ್ತೊಂದು ಕೊಠಡಿಯಲ್ಲಿ ಕಂಪ್ಯೂಟರ್ ತರಬೇತಿ ಕೂಡ ವಿದ್ಯಾ ರ್ಥಿಗಳಿಗೆ ನೀಡಲಾಗುತ್ತಿದೆ. ಕನ್ನಡದ ಜತೆಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡ ಲಾಗುತ್ತಿದೆ. ಶಾಲೆಯ ಸುತ್ತಲೂ ಮುಂ ಜಾಗ್ರತಾ ಕ್ರಮವಾಗಿ ನಾಲ್ಕು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಒತ್ತಡದ ನಡುವೆಯೂ ಶಾಲೆಯ ಅಭಿವೃದ್ಧಿ ಮಾತ್ರ ಶ್ಲಾಘನೀಯವಾಗಿದೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಕಳೆದ ಬಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಕುಂಞನಾಯ್ಕ ಮುಖ್ಯ ಶಿಕ್ಷಕರಾಗಿ ಹಾಗೂ ಸಚಿನ್ ಅಡ್ವಾಯಿ ಅವರು ಶಾಲಾ ಸಂಚಾಲಕರಾಗಿ ಹಾಗೂ ರಾಜೇಂದ್ರ ರೈ ಅವರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಕಂಪ್ಯೂಟರ್ ಶಿಕ್ಷಕಿ ಸೇರಿದಂತೆ ಗೌರವ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಇಲ್ಲಿಯ ಕಾಯಂ ಶಿಕ್ಷಕರು ವೇತನ ನೀಡುತ್ತಿದ್ದಾರೆ.

ಶತಮಾನೋತ್ಸವ ಸಂಭ್ರಮವನ್ನು ಶಾಲೆಯ ಹಲವಾರು ಮೂಲ ಸೌಲಭ್ಯಗ ಳನ್ನು ಪೂರೈಸುವುದರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಸಮಿತಿ ಸಂಕಲ್ಪ ಮಾಡಿಕೊಂಡಿದೆ. ರಂಗಮಂದಿರ, ಆಫೀಸ್ ಕೋಣೆ, ಗ್ರೀನ್ ರೂಂ, ವಾಚನಾಲಯ, ಪ್ರಯೋ ಗಾಲಯ, ತರಗತಿ ಕೋಣೆಗಳಿಗೆ ಟೈಲ್ಸ್, ಶೌಚಾಲಯ ನಿರ್ಮಾಣ, ಕಂಪ್ಯೂಟರ್ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕ, ಎಲ್‌ಕೆಜಿ ಹಾಗೂ ಯುಕೆಜಿ ಆರಂಭ, ಗೌರವ ಶಿಕ್ಷಕರಿಗೆ ಗೌರವಧನ ನೀಡುವ ಹೀಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.