ADVERTISEMENT

‘ದೇಶಕ್ಕೆ ಕೊಡುಗೆ ನೀಡಲು ಸಿದ್ಧರಾಗಿ’

​ಪ್ರಜಾವಾಣಿ ವಾರ್ತೆ
Published 18 ಮೇ 2017, 6:12 IST
Last Updated 18 ಮೇ 2017, 6:12 IST

ಬೆಳ್ತಂಗಡಿ: ದೇಶದ ಪ್ರಗತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಕೊಡು ಗೆಗಳು ಹೇರಳವಾಗಿದೆ. ಜಗತ್ತು ಭಾರತದತ್ತ ನೋಡುತ್ತಿರುವ ಈ ದಿನಗಳಲ್ಲಿ ಕ್ರೈಸ್ತ ಸಮುದಾಯ ದೇಶಕ್ಕೆ ಮಹತ್ವದ ಕೊಡುಗೆಗಳನ್ನು ನೀಡಲು ಸಿದ್ಧವಾಗಬೇಕು. ಯೇಸು ಕ್ರಿಸ್ತರ ಆದರ್ಶಗಳನ್ನು ಮೈಗೂಡಿಸಿಕೊಂಡು, ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಿರೋ ಮಲಬಾರ್ ಕ್ಯಾಥೊಲಿಕ್‌ ಸಭೆಯ ಆರ್ಚ್‌ ಬಿಷಪ್  ಕಾರ್ಡಿನಲ್ ಜಾರ್ಜ್ ಆಲಂಚೇರಿ ಸಲಹೆ ನೀಡಿದರು.

ಬೆಳ್ತಂಗಡಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸೀರೋ ಮಲಬಾರ್ ಕ್ಯಾಥೊಲಿಕ್‌ ಅಸೋಸಿಯೇಷನ್ ವತಿಯಿಂದ ಬುಧವಾರ ಆಯೋಜಿಸಿದ್ದ ‘ಸಂಗಮ 2017’ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.

ಕೇರಳದಿಂದ ಕರ್ನಾಟಕದ ವಿವಿಧ ಭಾಗಗಳಿಗೆ ಬಂದು ನೆಲೆಸಿರುವ ಕ್ರೈಸ್ತರು, ಇಲ್ಲಿನ ಭಾಷೆ ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ಈ ಮಣ್ಣಿನ ಮಕ್ಕಳಾಗಿ ಬೆಳೆದಿದ್ದಾರೆ. ಎಲ್ಲರನ್ನೂ ಪ್ರೀತಿಸುವ ಮೂಲಕವಾಗಿ ಎಲ್ಲರ ಒಳಿತಿಗಾಗಿ ಶ್ರಮಿಸುವ ಮೂಲಕ ಸಮುದಾಯ ಇನ್ನಷ್ಟು ಮುಂದುವರಿಯಲಿ ಎಂದು ಆಶಿಸಿದರು.

ADVERTISEMENT

ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಾತನಾಡಿ, ಯಾವುದೇ ಒಂದು ಸಮುದಾಯ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಮಾತ್ರ ಆ ಸಮುದಾಯ ಮುಂದುವರಿಯಲು ಸಾಧ್ಯವಿದೆ. ಇದೀಗ ಅತ್ಯಂತ ಉತ್ತಮವಾದ ಸಮಾವೇಶವನ್ನು ಏರ್ಪಡಿಸುವ ಮೂಲಕ ಸಮಾಜದ ಏಳಿಗೆಗೆ ಹೊಸ ಕೊಡುಗೆ ನೀಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಮಾತನಾಡಿ, ಇಲ್ಲಿನ ಕ್ರೈಸ್ತ ಸಮುದಾಯ ಬೆವರು ಸುರಿಸಿ, ಉತ್ತಮ ಜೀವನವನ್ನು ಕಟ್ಟಿಕೊಂಡಿ ದ್ದಾರೆ. ತಮ್ಮ ಪ್ರಗತಿಯೊಂದಿಗೆ ನಾಡಿನ ಅಭಿವೃದ್ಧಿಯಲ್ಲಿಯೂ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇಂತಹ ಸಮಾವೇಶಗಳು ಸಮುದಾಯದ ಜನರಲ್ಲಿ ಹೊಸ ಉತ್ಸಾಹವನ್ನು ಮೂಡಿಸುತ್ತವೆ ಎಂದರು.

ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಮುದಾಯ ನೀಡುತ್ತಿರುವ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಕೃಷಿಯನ್ನೇ ನಂಬಿ ಬದುಕನ್ನು ನಡೆಸುತ್ತಿದ್ದ ಒಂದು ಸಮುದಾಯ, ಇಂದು ಶಿಕ್ಷಣದ ಮೂಲಕ ಉನ್ನತಿಯತ್ತ ಬೆಳೆಯಲು ಸಾಧ್ಯವಾಗಿದೆ. ಸಾಮಾಜಿಕ ಸಂಘಟನೆಗಳು ಎಲ್ಲ ಮಕ್ಕಳಿಗೂ ಉತ್ತಮವಾದ ಶಿಕ್ಷಣ ಒದಗಿಸುವತ್ತ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.

ತಲಶೇರಿ ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಮಾರ್ ಜಾರ್ಜ್, ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕ ಜೆ.ಆರ್. ಲೋಬೋ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ಸಿರಿಯಕ್ ಥೋಮಸ್, ಹಿರಿಯ ಕೆಎಎಸ್ ಅಧಿಕಾರಿ ಮಥಾಯಿ. ಕ್ಯಾಥೊಲಿಕ್‌ ಕಾಂಗ್ರೆಸ್‌ನ ಕೇಂದ್ರೀಯ ಕಾರ್ಯದರ್ಶಿ ಬಿಜು ಪರನಿಲಮ್ ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜದವರನ್ನು ಸನ್ಮಾನಿ ಸಲಾಯಿತು, ಬೆಳ್ತಂಗಡಿ ಪಟ್ಟಣ ಪಂಚಾ ಯಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ ವರ್ಗೀಸ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬಿಜೆಪಿ ತಾಲ್ಲೂಕು ಸಮಿತಿ ಅಧ್ಯಕ್ಷ ರಂಜನ್ ಜಿ. ಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ವಿ.ಟಿ. ಸೆಬಾಸ್ಟಿನ್, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಶಿವಕುಮಾರ್, ಬೆಳ್ತಂಗಡಿ ಚರ್ಚ್‌ನ ಧರ್ಮಗುರು ಬೊನವೆಂಚರ್ ನಝರೆತ್, ಕೆಎಸ್‍ಎಂಸಿಎ ಜಿಲ್ಲಾ ಅಧ್ಯಕ್ಷ ಬೆಟ್ಟಿ ನೆಡುನಿಲಂ, ಉಡುಪಿ ಜಿಲ್ಲಾ ಅಧ್ಯಕ್ಷ ಪಿ.ಎಲ್ ಜೋಸ್, ಕೊಡಗು ಜಿಲ್ಲಾ ಅಧ್ಯಕ್ಷ ಮ್ಯಾಥ್ಯೂ, ನಿರ್ದೇಶಕ ಫಾ. ಬಿನೋಯಿ ಜೋಸೆಫ್, ಇದ್ದರು.

ಕೇಂದ್ರೀಯ ಸಮಿತಿಯ ಅಧ್ಯಕ್ಷ ಕ್ಸೇವಿಯರ್ ಪಾಲೇಲಿ ಸ್ವಾಗತಿಸಿದರು. ಎಂ.ಎನ್. ಜೋಸೆಫ್ ಹಾಗೂ ಟಿ.ಜೆ. ಜೋಸೆಫ್ ನಿರೂಪಿಸಿದರು. ಉಪಾಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ. ವಂದಿಸಿದರು.

**

ಮಲೆನಾಡಿನ ಕೃಷಿಕರು ಎದುರಿ ಸುತ್ತಿರುವ ರಬ್ಬರ್‌ ಬೆಳೆಯ ಬೆಲೆ ಕುಸಿತ ಹಾಗೂ ಕಸ್ತೂರಿರಂಗನ್ ವರದಿ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು.
-ಆಸ್ಕರ್‌ ಫರ್ನಾಂಡಿಸ್,
ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.