ಮಂಗಳೂರು: ಅಬುಧಾಬಿ ಕಂಪೆನಿಯು ಭಾರತದಲ್ಲಿ ಕಚ್ಚಾತೈಲ ಸಂಗ್ರಹಣೆ ಮಾಡುವ ಮೂಲಕ ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಯುಎಇ ಇನ್ನಷ್ಟು ಗಟ್ಟಿಗೊಳಿಸಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಜಂಟಿ ಕಾರ್ಯದರ್ಶಿ ಸಂಜಯ ಸುಧೀರ್ ಹೇಳಿದರು.
ನಗರದ ಪೆರ್ಮುದೆ ಐಎಸ್ಪಿಆರ್ಎಲ್ ತೈಲ ಸಂಗ್ರಹಾಗಾರದಲ್ಲಿ ಯುಎಇಯ ಅಬುಧಾಬಿ ನ್ಯಾಶನಲ್ ಆಯಿಲ್ ಕಂಪನಿಯ ಮೊದಲ ಕಂತಿನ ಕಚ್ಚಾತೈಲವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಯುಎಇ ಜತೆಗೆ ಭಾರತ ಕೇವಲ ರಾಜತಾಂತ್ರಿಕ ಸಂಬಂಧವನ್ನು ಹೊಂದಿಲ್ಲ. ಅದನ್ನೂ ಮೀರಿದ ಸ್ನೇಹವನ್ನು ಹೊಂದಿದೆ. ಯುಎಇಯಲ್ಲಿ ಭಾರತದ ಸುಮಾರು 33 ಲಕ್ಷ ಜನರು ನೆಲೆಸಿದ್ದು, ಆ ದೇಶವನ್ನು ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ವ್ಯಾಪಾರ, ಬಂಡವಾಳ ಹೂಡಿಕೆ, ಇಂಧನ ಭದ್ರತೆಗಳ ಮೇಲೆ ದೇಶಗಳ ನಡುವಿನ ಸಂಬಂಧ ನಿರ್ಧರಿತವಾಗುತ್ತದೆ. ಭಾರತ ಹಾಗೂ ಯುಎಇ ರಾಷ್ಟ್ರಗಳು ದ್ವಿಪಕ್ಷೀಯ ವ್ಯಾಪಾರ ಹಾಗೂ ಬಂಡವಾಳ ಹೂಡಿಕೆಯಲ್ಲಿ ತೊಡಗಿದ್ದು, ಇಂಧನ ಭದ್ರತೆಯ ದೃಷ್ಟಿಯಿಂದ ಯುಎಇ ಇದೀಗ ಮಂಗಳೂರಿನ ಭಾರತೀಯ ವ್ಯೂಹಾತ್ಮಕ ತೈಲು ಸಂಗ್ರಹ ಕಂಪೆನಿ (ಇಂಡಿಯನ್ ಸ್ಟ್ರ್ಯಾಟರ್ಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಕಂಪೆನಿ) ತೈಲ ಸಂಗ್ರಹಾಗಾರದಲ್ಲಿ ಕಚ್ಚಾ ತೈಲ ಸಂಗ್ರಹಿಸುತ್ತಿದೆ ಎಂದರು.
ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಯ ಮಾರುಕಟ್ಟೆ ನಿರ್ದೇಶಕ ಅಬ್ದುಲ್ ಸಲೀಂ ಅಲ್ ದಹೇರಿ ಮಾತನಾಡಿ, ಒಂದು ವಾರದ ಹಿಂದೆ ಅಬುದಾಬಿಯಲ್ಲಿ ಮೊದಲ ಹಂತದ ಕಚ್ಚಾ ತೈಲವನ್ನು ಹೊತ್ತ ಹಡಗಿಗೆ ಭಾರತದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಯುಎಇ ಸಚಿವ ಡಾ. ಸುಲ್ತಾನ್ ಅಲ್ ಜಬ್ಬೇರಿ, ಹಸಿರು ನಿಶಾನೆ ತೋರಿದ್ದರು. ಇದೀಗ ಈ ಹಡಗು ಮಂಗಳೂರು ತಲುಪಿದ್ದು, ಇಲ್ಲಿನ ತೈಲ ಸಂಗ್ರಹಾಗಾರದಲ್ಲಿ ಕಚ್ಚಾ ತೈಲ ಸಂಗ್ರಹಿಸಲಾಗಿದೆ ಎಂದರು. ಈ ವ್ಯವಹಾರದಿಂದ ಭಾರತ ಮತ್ತು ಯುಎಇ ವಾಣಿಜ್ಯ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ.
**
ಯುಇಎ ಸರ್ಕಾರದೊಂದಿಗಿನ ಒಪ್ಪಂದದ ಪರಿಣಾಮ ಭಾರತದ ಇಂಧನ ಭದ್ರತೆಗೆ ಸಹಕಾರಿಯಾಗಲಿದ್ದು, ಆರ್ಥಿಕತೆಯೂ ವೃದ್ಧಿಸಲಿದೆ
– ಸಂಜಯ ಸುಧೀರ್, ಪೆಟ್ರೋಲಿಯಂ ಇಲಾಖೆ ಜಂಟಿ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.