ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಹಿಂದುಳಿದ ವರ್ಗದ ಮಹಾನ್ ನಾಯಕ ಡಿ. ದೇವರಾಜ ಅರಸು ಅವರ 103ನೇ ವರ್ಷದ ಜನ್ಮ ದಿನಾಚರಣೆಯನ್ನು ಕುದ್ರೋಳಿ ನಾರಾಯಣಗುರು ಕಾಲೇಜಿ ನಲ್ಲಿ ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜೆ.ಆರ್.ಲೋಬೊ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದವರು, ಪರಿಶಿಷ್ಟ ಜಾತಿಗೆ ಸೇರಿದವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ದೊರಕಬೇಕಿದೆ ಎಂದರು.
ರೈತಾಪಿ ಕೆಲಸ ಮಾಡುತ್ತಿದ್ದ ಹಿಂದುಳಿದ ವರ್ಗದವರಿಗೆ ಸಂಪೂರ್ಣ ಬೆಂಬಲವನ್ನು ದೇವಾರಾಜ ಅರಸು ನೀಡಿದ್ದಾರೆ. ಇವರಿಗೆ ಬೆನ್ನೆಲುಬಾಗಿ ನಿಂತವರು ಇಂದಿರಾ ಗಾಂಧಿ. ಕೃತಜ್ಞತೆಯ ಮಾನೋಭಾವವನ್ನು ದೇವರಾಜ ಅರಸು ಹೊಂದಿದ್ದರು ಎಂದರು.
ದೇವರಾಜ ಅರಸು ಅವರ ಮನಸ್ಸು ಬೆಣ್ಣೆಯಂತೆ. ಇವರಿಗೆ ಸೈನ್ಯವನ್ನು ಸೇರಲು ಹಾಗೂ ಸಿನಿಮಾಗಳಿಗೆ ಅವಕಾಶ ಸಿಕ್ಕರೂ ಅದನ್ನು ಕಡೆಗಣಿಸಿ ರಾಜಕೀಯ ರಂಗಕ್ಕೆ ಬಂದು ಹಿಂದುಳಿದ ವರ್ಗಕ್ಕಾಗಿ ದುಡಿದರು ಎಂದು ಕಾರ್ನಾಡ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಲತಾ ಅಭಯ್ ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕುಳಾಯಿ ಪಿ.ಸಾಧು ಪೂಜಾರಿ ಮತ್ತು ಭಾಸ್ಕರ ಕುಲಾಲ್ ಬರ್ಕೆ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಅಧ್ಯಕ್ಷ ನವೀನ್ ಡಿ. ಸುವರ್ಣ, ಉಪಾಧ್ಯಕ್ಷ ಎ.ಕೆ. ಭಂಡಾರಿ, ಡಿ.ಧರ್ಮಪ್ಪ ಪುರುಷ, ಪ್ರಧಾನ ಕಾರ್ಯದರ್ಶಿ ಎಂ.ಜಯಾನಂದ ದೇವಾಡಿಗ, ಕೋಶಾಧಿಕಾರಿ ಪುರುಷೋತ್ತಮ ಕೊಟ್ಟಾರಿ ಮಲ್ಲೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.