ADVERTISEMENT

‘ನೈತಿಕತೆ, ಸಂಸ್ಕಾರ ಸರ್ವಧರ್ಮಗಳ ಸಾರ’

ಧರ್ಮಸ್ಥಳದಲ್ಲಿ 82ನೇ ಸರ್ವಧರ್ಮ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:43 IST
Last Updated 21 ನವೆಂಬರ್ 2014, 19:43 IST
ಧರ್ಮಸ್ಥಳದ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ ಸರ್ವಧರ್ಮ ಸಮ್ಮೇಳನಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ತೆರಳಿದಾಗ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಇತರರು ಅವರಿಗೆ ಜತೆಯಾದರು
ಧರ್ಮಸ್ಥಳದ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ ಸರ್ವಧರ್ಮ ಸಮ್ಮೇಳನಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ತೆರಳಿದಾಗ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಇತರರು ಅವರಿಗೆ ಜತೆಯಾದರು   

ಉಜಿರೆ (ದಕ್ಷಿಣ ಕನ್ನಡ ಜಿಲ್ಲೆ): ತನಗಾಗಿ ಬದುಕುವುದು ಜೀವನವಲ್ಲ. ನಾವು ಇತರರಿಗಾಗಿ ಬದುಕುವುದೇ ಸಾರ್ಥಕ ಜೀವನ. ನೈತಿಕತೆ ಮತ್ತು ಉತ್ತಮ ಸಂಸ್ಕಾರ ಸರ್ವಧರ್ಮಗಳ ಸಾರವಾಗಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು. ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ 82ನೇ  ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಸದಾ ಸತ್ಯವನ್ನು ಹೇಳಿ ಧರ್ಮ ಮಾರ್ಗದಲ್ಲಿ ನಡೆಯಬೇಕು. ನಮ್ಮ ದೈನಂದಿನ ಆಚಾರ – ವಿಚಾರಗಳು, ವ್ಯವಹಾರಗಳು ಧರ್ಮದ ನೆಲೆಯಲ್ಲಿ ಆದಾಗ ಮಾತ್ರ ಸುಖ, -ಶಾಂತಿ, ನೆಮ್ಮದಿ ಸಿಗುತ್ತದೆ’ ಎಂದು ಅವರು ಹೇಳಿದರು.

ಧರ್ಮವು ಲೋಕ ಕಲ್ಯಾಣಕಾರಕವಾಗಿದ್ದು ಸಾಮಾಜಿಕ ವ್ಯವಸ್ಥೆ­ಯನ್ನು ಎತ್ತಿ ಹಿಡಿದು ಮಾನವ ಜನಾಂಗಕ್ಕೆ ಯೋಗ ಕ್ಷೇಮವನ್ನು ಉಂಟುಮಾಡಿ ಪ್ರಗತಿಯನ್ನು ಸಾಧಿಸಲು ಸಹಾಯಕ­ವಾಗಿದೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ಕಾಪಾಡು­ತ್ತದೆ. ನಾವು ಧರ್ಮವನ್ನು ನಾಶಪಡಿಸಿದರೆ ಅದರ ಪರಿಣಾಮವಾಗಿ ನಾವೇ ನಾಶ ಹೊಂದುತ್ತೇವೆ ಎಂದು  ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಸ್ವಾಗತ ಭಾಷಣದಲ್ಲಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕತ್ತಲಾದ ನಮ್ಮ ಬದುಕಿನಲ್ಲಿ ಶಕ್ತಿ ಮತ್ತು ಬೆಳಕನ್ನು ನೀಡುವುದೇ ಧರ್ಮ ಎಂದರು.

ಬೆಂಗಳೂರಿನ ಡಾ.ಬಿ ವಿ. ರಾಜಾರಾಮ್ ‘ಬೌದ್ಧ ಧರ್ಮದಲ್ಲಿ ಧರ್ಮ ಸಮನ್ವಯ’ದ ಬಗ್ಗೆ, ಸುಧಾ ವಾರಪತ್ರಿಕೆಯ ಸಹ ಸಂಪಾದಕ ಬಿ.ಎಂ. ಹನೀಫ್ ‘ಇಸ್ಲಾಂ ಧರ್ಮದಲ್ಲಿ ಸಮನ್ವಯ’ದ ಬಗ್ಗೆ, ಮಂಗಳೂರಿನ ಕ್ಲಿಫರ್ಡ್ ಫರ್ನಾಂಡಿಸ್ ‘ಕ್ರೈಸ್ತ ಧರ್ಮದಲ್ಲಿ ಸಮನ್ವಯ’ದ ಬಗ್ಗೆ ಉಪನ್ಯಾಸ ನೀಡಿದರು.

ಡಿ. ಸುರೇಂದ್ರ ಕುಮಾರ್ ಮತ್ತು ಪ್ರೊ.ಎಸ್. ಪ್ರಭಾಕರ್ ಇದ್ದರು. ತಮಿಳುನಾಡಿನ ಶಂಕರನ್ ನಂಬೂದಿರಿ ಅವರ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಬಳಿಕ ಕಂಚಿಮಾರು ಕಟ್ಟೆ ಉತ್ಸವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.