ADVERTISEMENT

21ರಿಂದ ಮಂಗಳೂರು ದಸರಾ ಆರಂಭ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 8:50 IST
Last Updated 19 ಸೆಪ್ಟೆಂಬರ್ 2017, 8:50 IST
ಬಿ.ಜನಾರ್ದನ ಪೂಜಾರಿ
ಬಿ.ಜನಾರ್ದನ ಪೂಜಾರಿ   

ಮಂಗಳೂರು: ಮಂಗಳೂರು ದಸರೆಗೆ ಎಲ್ಲ ಸಿದ್ಧತೆಗಳು ಮುಗಿದ್ದು ಇದೇ 21ರಂದು ದಸರಾ ಸಂಭ್ರಮ ಉದ್ಘಾಟನೆಯಾಗಲಿದೆ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಹೇಳಿದರು.

ಕ್ಷೇತ್ರದ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 21ರಂದು ಮಧ್ಯಾಹ್ನ 12.20ಕ್ಕೆ ನವದುರ್ಗೆಯರ ಹಾಗೂ ಶ್ರೀಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯಲಿದೆ. 28ರಂದು ಬೆಳಿಗ್ಗೆ 10 ಗಂಟೆಗೆ ಚಂಡಿಕಾಹೋಮ, ಹಗಲೋತ್ಸವ ಜರುಗಲಿದೆ.

ಉತ್ಸವ ಸಂದರ್ಭ ಪ್ರತಿದಿನ ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ಪ್ರತಿದಿನ ಸಂಜೆ 6ರಿಂದ ರಾಷ್ಟ್ರೀಯ, ಅಂತರರಾಷ್ಟ್ರೀಯ ಕಲಾವಿದರಿಂದ ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ADVERTISEMENT

30ರಂದು ಸಂಜೆ 4 ಗಂಟೆಗೆ ವೈಭವದ ‘ಮಂಗಳೂರು ದಸರಾ’ ಶ್ರೀಶಾರದಾ ಮಾತೆಯ ಶೋಭಾಯಾತ್ರೆ ಮತ್ತು ವಿಸರ್ಜನಾ ಸಮಾರಂಭ ನಡೆಯಲಿದೆ. ಮೆರವಣಿಗೆಯಲ್ಲಿ ಶ್ರೀಶಾರದಾ ಮಾತೆ, ಮಹಾಗಣಪತಿ, ನವದುರ್ಗೆಯರ ಮೂರ್ತಿ ಸಹಿತ ರಾಜ್ಯದ ನಾನಾ ಭಾಗಗಳಿಂದ ಬರಲಿರುವ 75ಕ್ಕಿಂತಲೂ ಅಧಿಕ ಟ್ಯಾಬ್ಲೋಗಳು ಭಾಗವಹಿಸಲಿವೆ. ಜಿಲ್ಲೆಯ ಹಾಗೂ ಹೊರಜಿಲ್ಲೆಯ ಜಾನಪದ ತಂಡಗಳು ಮೆರವಣಿಗೆಗೆ ವಿಶೇಷ ಸೊಬಗನ್ನು ನೀಡಲಿವೆ ಎಂದರು.

ಈ ಎಲ್ಲ ಕಾರ್ಯಕ್ರಮಗಳ ಸಿದ್ಧತೆಗಳು ಪೂರ್ಣಗೊಂಡಿದೆ. ನಗರವನ್ನು ವಿದ್ಯುತ್‌ದೀಪಗಳಿಂದ ಸಿಂಗರಿಸಲಾಗಿದೆ. ಶೋಭಾಯಾತ್ರೆ ಕುದ್ರೋಳಿ ದೇವಸ್ಥಾನದಿಂದ ಹೊರಟು ಲೇಡಿಹಿಲ್, ಬಳ್ಳಾಲ್‌ಬಾಗ್, ಕೊಡಿಯಾಲ್‌ಬೈಲ್, ಹಂಪನಕಟ್ಟೆ, ವಿವಿ ಕಾಲೇಜು, ಗಣಪತಿ ಹೈಸ್ಕೂಲ್ ರಸ್ತೆ, ರಥಬೀದಿ, ನ್ಯೂಚಿತ್ರ ಮಾರ್ಗವಾಗಿ ಮರಳಿ ಕುದ್ರೋಳಿ ಕ್ಷೇತ್ರಕ್ಕೆ ಬಂದು ಪುಷ್ಕರಣಿಯಲ್ಲಿ ವಿಸರ್ಜನೆಗೊಳ್ಳಲಿದೆ.

ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಮಾಧವ ಸುವರ್ಣ, ಖಜಾಂಜಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಬಿ.ಕೆ.ತಾರಾನಾಥ್, ರವಿಶಂಕರ್ ಮಿಜಾರ್, ಕೆ.ಮಹೇಶ್ಚಂದ್ರ, ಅಭಿವೃದ್ಧಿ ಸಮಿತಿಯ ದೇವೇಂದ್ರ ಪೂಜಾರಿ, ಎನ್.ಹರಿಶ್ಚಂದ್ರ, ಹರಿಕೃಷ್ಣ ಬಂಟ್ವಾಳ್, ಎಂ.ಶೇಖರ್ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.