ಸಂತೇಬೆನ್ನೂರು: ಸುಧಾರಿತ ಗಸ್ತು ವ್ಯವಸ್ಥೆಗೆ ಕೈ ಜೋಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಚನ್ನಗಿರಿಯ ಪೊಲೀಸ್ ವೃತ್ತ ನಿರೀಕ್ಷಕ ಎಸ್.ಆರ್.ಪಾಟೀಲ್ ಸಲಹೆ ನೀಡಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಸುಧಾರಿತ ಗಸ್ತು ವ್ಯವಸ್ಥೆ’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
‘ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಗೆ 47 ಗ್ರಾಮಗಳು ಸೇರಿವೆ. ಒಬ್ಬ ಸಿಬ್ಬಂದಿ ಎರಡು ಗ್ರಾಮಗಳ ಗಸ್ತು ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವರು. ಸಾರ್ವಜನಿಕರಿಗೆ ಸಮೀಪದಲ್ಲೇ ಸೇವೆ ಸಿಗಲಿ ಎಂಬ ಉದ್ದೇಶದಿಂದ ಈ ವ್ಯವಸ್ಥೆ ಆರಂಭಿಸಲಾಗಿದೆ. ದೂರು ದಾಖಲಿಸುವ ಅಧಿಕಾರ ಇರುವುದಿಲ್ಲ. ಆದರೆ, ಮೇಲಧಿಕಾರಿಕಾರಿ ಮಾಹಿತಿ ನೀಡಲಿದ್ದಾರೆ’ ಎಂದು ಅವರು ತಿಳಿಸಿದರು.
‘ಗ್ರಾಮವು ವೇಗವಾಗಿ ಬೆಳೆಯುತ್ತಿದೆ. ಯಾರಾದರೂ ಶಾಂತಿ ಕದಡಲು ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಾಂತಿ–ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.
‘ಈ ಬಾರಿಯ ಗಣೇಶ ಉತ್ಸವದಲ್ಲಿ ಗ್ರಾಮಕ್ಕೆ ಒಂದೇ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಚಿಂತನೆ ನಡೆಸಿ. ಇದಕ್ಕೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವೇಂದ್ರಪ್ಪ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಎಂ.ಸಿದ್ದಪ್ಪ ಮಾತನಾಡಿದರು. ಗ್ರಾಮದ ಮುಖಂಡ ರುದ್ರಪ್ಪ, ಎ.ಎಸ್.ಐ ಚನ್ನಪ್ಪ ಹಾಜರಿದ್ದರು. ತಿರುಮಲೇಶ್ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.