ADVERTISEMENT

ಒತ್ತಡ ನಿರ್ವಹಿಸುವ ಮನಸ್ಥಿತಿ ಬೆಳೆಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2017, 5:59 IST
Last Updated 7 ಏಪ್ರಿಲ್ 2017, 5:59 IST

ದಾವಣಗೆರೆ: ‘ದಿನದ ಬಹುತೇಕ ಸಮಯ ಸಾರ್ವಜನಿಕರೊಂದಿಗೆ ಒಡನಾಡುವ ಪೊಲೀಸ್‌ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಸಿಬ್ಬಂದಿ ಸಹಜವಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿರುತ್ತಾರೆ. ಮಾನಸಿಕ ಸಮ ತೋಲನ ಕಳೆದುಕೊಳ್ಳದೇ ಎಲ್ಲರೂ ಸಮಾನ ಮನಸ್ಥಿತಿಯಿಂದ ಕೆಲಸ ಮಾಡುವಂತಹ ಗುಣ ಬೆಳೆಸಿಕೊಳ್ಳಬೇಕು ಎಂದು ಡಾ.ಭೀಮಾಶಂಕರ ಎಸ್‌.ಗುಳೇದ ಸಲಹೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಪೊಲೀಸ್‌ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಒತ್ತಡ ನಿರ್ವಹಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆಧುನಿಕ ಜೀವನದಲ್ಲಿ ಎಲ್ಲರೂ ಒತ್ತಡಕ್ಕೆ ಒಳಗಾಗಿದ್ದಾರೆ.  ಪ್ರತಿಯೊಂದು ವಿಚಾರವೂ ಟಿವಿ ಮಾಧ್ಯಮಗಳಲ್ಲಿ ಕ್ಷಣಕ್ಷಣಕ್ಕೂ ಬಿತ್ತರವಾಗುತ್ತಿದೆ. ಈ ಹಿಂದೆ ಇಂತಹ ಒತ್ತಡಗಳು ಇರಲಿಲ್ಲ. ಯಾವ ಸಂದರ್ಭದಲ್ಲಿಯೂ ಮಾನಸಿಕ ಸ್ಥಿಮಿತ ಕಳೆದುಕೊಳ್ಳದೇ ಕರ್ತವ್ಯ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಪೂರ್ವವಲಯ ವ್ಯಾಪ್ತಿಯ ದಾವಣಗೆರೆಯಲ್ಲಿಯೇ ಹೆಚ್ಚು ಹೆಲ್ಮೆಟ್‌ ಪ್ರಕರಣಗಳು ದಾಖಲಾಗುತ್ತಿವೆ. ಎಲ್ಲರೂ ಕಾನೂನು ನಿಯಮ ಪಾಲನೆ ಮಾಡಬೇಕು. ಪೊಲೀಸ್‌ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸಮಧಾನದಿಂದ ವರ್ತಿಸಬೇಕು’ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತ್ರಿಪುಲಾಂಬ ಮಾತನಾಡಿ, ‘ಒತ್ತಡ ಹಾಗೂ ಸಮಸ್ಯೆಗಳನ್ನು ಎದುರಿಸದೇ ಕೆಲವರು ಆತ್ಮಹತ್ಯೆಯಂತಹ ಪಿಡುಗಿಗೆ ಒಳಗಾಗುತ್ತಿದ್ದಾರೆ. ತಾಳ್ಮೆ, ಸಹನೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಕುಷ್ಠರೋಗ ನಿವಾರಣಾ ಧಿಕಾರಿ ಡಾ.ಸರೋಜಾಬಾಯಿ ಪ್ರಾಸ್ತಾವಿ ಕವಾಗಿ ಮಾತನಾಡಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಯಶೋದಾ ಎಸ್.ವಂಟಗೋಡಿ, ಪೊಲೀಸ್‌ ಉಪ ನಿರೀಕ್ಷಕ  ಮಂಜುನಾಥ ಗಂಗೂರು, ಡಾ.ದಯಾನಂದ ಸಾಗರ್, ಆರೋಗ್ಯ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.