ADVERTISEMENT

ಕಡ್ಡಾಯ ಹೆಲ್ಮೆಟ್‌ ಜಾರಿ; ಧರಿಸದಿದ್ದರೆ ದಂಡ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್‌.ಗುಳೇದ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:03 IST
Last Updated 8 ಫೆಬ್ರುವರಿ 2017, 6:03 IST

ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣೆ ಎದುರಲ್ಲೇ ಶ್ರೀಗಂಧದ ಮರ ಕಳವು ಮಾಡಿದ್ದ 6 ಆರೋಪಿಗಳನ್ನು ಬಂಧಿಸಿ 50 ಕೆ.ಜಿ ಗಂಧ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್‌.ಗುಳೇದ ಮಾಹಿತಿ ನೀಡಿದರು.

ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ‘ಬಂಧಿತರೆಲ್ಲರೂ ಚನ್ನಗಿರಿ ಪಟ್ಟಣದವ ರಾಗಿದ್ದು, ಮಹಮ್ಮದ್ ರಫೀಕ್, ಮನಸೂರ್ ಬೇಗ್, ಮಹಮ್ಮದ್ ಶಫಿ, ಅಯೂಬ್, ಮಹಮ್ಮದ್ ಇಸ್ಮಾಯಿಲ್, ಅಜ್ಮತ್‌ ಉಲ್ಲಾ ಎಂದು ಗುರುತಿ ಸಲಾಗಿದೆ. ಆರೋಪಿಗಳಿಂದ ₹ 1 ಲಕ್ಷ ಮೌಲ್ಯದ ಶ್ರೀಗಂಧ ವಶಪಡಿ ಸಿಕೊಳ್ಳಲಾಗಿದೆ’ ಎಂದರು.

ಗ್ರಾಮಾಂತರ ಉಪ ವಿಭಾಗದ ಡಿವೈಎಸ್‌ಪಿ ಬಿ.ಎಸ್‌.ನೇಮಗೌಡ, ಚನ್ನಗಿರಿ ಸಿಪಿಐ ಆರ್‌.ಆರ್.ಪಾಟೀಲ್, ಪಿಎಸ್ಐ ವೀರಬಸಪ್ಪ ಕುಸಲಾಪುರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದು, ಬಹುಮಾನ ನೀಡಲಾ ಗುವುದು ಎಂದು ಎಸ್‌ಪಿ ಪ್ರಕಟಿಸಿದರು.

ಪ್ರೀಪೇಡ್ ಆಟೋ ವ್ಯವಸ್ಥೆ: ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ, ಸಂಚಾರ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರೀಪೇಡ್ (ಪೂರ್ವಪಾವತಿ) ಆಟೊ ವ್ಯವಸ್ಥೆ ಜಾರಿಗೆ ಚಿಂತನೆ ನಡೆದಿದೆ. ಈ ಸಂಬಂಧ ಆರ್‌ಟಿಒ ಅಧಿಕಾರಿಗಳ ಹಾಗೂ ಆಟೋ ಚಾಲಕರ ಸಂಘದ ಜತೆ ಮಾತುಕತೆ ನಡೆಸಲಾಗುವುದು ಎಂದರು.

ಸರಗಳ್ಳರ ಹಾವಳಿಗೆ ಬ್ರೇಕ್‌: ನಗರದಲ್ಲಿ ಸರಗಳ್ಳರ ಹಾವಳಿ ತಡೆಗೆ ಮೂರು ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳ ಬಗ್ಗೆ ಸುಳಿವು ದೊರೆತಿದೆ. ಶೀಘ್ರವೇ ಸರಗಳ್ಳತನಕ್ಕೆ ಬ್ರೇಕ್ ಬೀಳಲಿದ್ದು, ನಾಗರಿಕರು ಭಯಪಡುವ ಅಗತ್ಯವಿಲ್ಲ ಎಂದು ಎಸ್‌ಪಿ ತಿಳಿಸಿದರು.

ಸಿಸಿ ಟಿವಿ ಕ್ಯಾಮೆರಾ: ನಗರದಲ್ಲಿ ಅಪರಾಧ ಚಟುವಟಿಕೆಗಳ ತಡೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಅತ್ಯಗತ್ಯ. ಆದರೆ, ಇಲಾಖಾ ಮಟ್ಟದಲ್ಲಿ ಅಡೆತಡೆಗಳಿದ್ದು, ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ದಾವಣಗೆರೆ ರಾಜ್ಯದಲ್ಲಿ 6ನೇ ದೊಡ್ಡ ನಗರವಾಗಿದ್ದು ‘ಡಿ–ಟ್ರಾಕ್‌’ ಸಂಚಾರ ವ್ಯವಸ್ಥೆ ಜಾರಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಈ ಯೋಜನೆಯಡಿ ಸಂಚಾರ ವ್ಯವಸ್ಥೆ ಬಲಗೊಳ್ಳಲಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಸಂಚಾರ ನಿಯಮ ಉಲ್ಲಂಘಿಸಿದರೆ ವಾಹನ ಮಾಲೀಕರ ಮನೆಗೆ ನೋಟಿಸ್ ರವಾನೆಯಾಗುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ತಿಳಿಸಿದರು.ಈ ಸಂದರ್ಭ ಹೆಚ್ಚುವರಿ ಎಸ್‌ಪಿ ಯಶೋದಾ ವಂಟಗೋಡಿ ಸೇರಿದಂತೆ ಹಲವರು ಇದ್ದರು.

ಹೆಲ್ಮೆಟ್ ಕಡ್ಡಾಯ
ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ವಾಹನ ಸವಾರರಿಗೆ ದಂಡ ಹಾಕಲಾಗುವುದು ಎಂದು ಎಸ್‌ಪಿ ಎಚ್ಚರಿಕೆ ನೀಡಿದರು.

ADVERTISEMENT

ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ವಾಹನ ಸವಾರರಿಗೆ ಜಾಗೃತಿ ಮೂಡಿಸಲಾಗಿದೆ. ಹಲವೆಡೆ ಪ್ರಚಾರ ನಡೆಸಲಾಗಿದೆ. ಸಾಕಷ್ಟು ಸಮಯಾವಕಾಶವನ್ನೂ ನೀಡಲಾಗಿದೆ. ಪ್ರತಿಯೊಬ್ಬರೂ ಸುರಕ್ಷೆ ದೃಷ್ಟಿಯಿಂದ ಹೆಲ್ಮೆಟ್ ಧರಿಸಲೇಬೇಕು ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.