ಹರಪನಹಳ್ಳಿ: ‘ದೇಶಕ್ಕೆ ಸಂವಿಧಾನ ಇರುವಂತೆ ಧರ್ಮಕ್ಕೂ ಸಂವಿಧಾನ ಇದೆ. ಎಲ್ಲಾ ಧರ್ಮೀಯರನ್ನು ಒಗ್ಗೂಡಿಸುವ ವೀರಶೈವ ಲಿಂಗಾಯತ ಧರ್ಮವನ್ನು ಪ್ರತ್ಯೇಕಿಸುವ ತಂತ್ರ ನಡೆಯದು’ ಎಂದು ಬಾಳೆಹೊನ್ನೂರು ಪೀಠದ ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು
ತೆಗ್ಗಿನ ಮಠದಲ್ಲಿ ಶನಿವಾರ ನಡೆದ ಚಂದ್ರಮೌಳೀಶ್ವರ ಸ್ವಾಮೀಜಿ 3ನೇ ವರ್ಷದ ಪುಣ್ಯಾರಾಧನೆ ಮತ್ತು ವರಸದ್ಯೋಜಾತ ಸ್ವಾಮೀಜಿ ಅವರ ದ್ವಿತೀಯ ವರ್ಷದ ಪೀಠಾರೋಹಣ ವಾರ್ಷಿಕೋತ್ಸವ ಸಮಾರಂಭದಲ್ಲಿ ಧರ್ಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ವೀರಶೈವ ಕುರಿತ 28 ಶಿವಾಗಮಗಳಿಗೆ ಉತ್ತರ ಭಾರತದಲ್ಲಿ ಐತಿಹಾಸಿಕ ದಾಖಲೆಗಳಿವೆ. ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಅವುಗಳ ಕುರಿತು ಮಾಹಿತಿ ಇದೆ. 12ನೇ ಶತಮಾನದಲ್ಲಿ ಬಸವಣ್ಣ ವಚನಗಳಲ್ಲಿ ಪರಮಸತ್ಯವನ್ನು ಹೇಳಿದ್ದಾನೆ. ಆದರೆ ವೈಚಾರಿಕ ಚಿಂತನೆ ಹೆಸರಿನಲ್ಲಿ ಧರ್ಮವನ್ನು ಒಡೆಯುವ ಪ್ರಯತ್ನ ನಡೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವು ರಾಜಕೀಯ ಶಕ್ತಿಗಳು ಪೀಠಾಧ್ಯಕ್ಷರಿಗೆ ಆಮಿಷ ಒಡ್ಡಿ ಧರ್ಮ ಒಡೆಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು.
ಈ ತಿಂಗಳ 24ರಂದು ಗದಗದಲ್ಲಿ ವೀರಶೈವ ಲಿಂಗಾಯತ ಸಮಾವೇಶ ನಡೆಯಲಿದ್ದು, ಪಂಚಪೀಠಾಧೀಶರು, ಶಿವಾಚಾರ್ಯರು, ವಿರಕ್ತ ಮಠಾಧೀಶರ ಸಮಾವೇಶ ನಡೆಯಲಿದೆ. ಎರಡು ಲಕ್ಷ ಭಕ್ತರು ಸೇರಲಿದ್ದಾರೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.