ADVERTISEMENT

ಹರಪನಹಳ್ಳಿ ಬಿಜೆಪಿ ಟಿಕೆಟ್‌: ಸ್ಥಳೀಯರ ಹೋರಾಟಕ್ಕೆ ಬೆಂಬಲ– ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 6:31 IST
Last Updated 21 ಅಕ್ಟೋಬರ್ 2017, 6:31 IST
ಶ್ರೀರಾಮುಲು
ಶ್ರೀರಾಮುಲು   

ಹರಪನಹಳ್ಳಿ: ‘ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗೇ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿ  ಬಿಜೆಪಿ (ಎನ್‌.ಕೊಟ್ರೇಶ್‌ ನೇತೃತ್ವದ ಗುಂಪು) ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ’ ಎಂದು ಬಳ್ಳಾರಿ ಲೋಕಸಭಾ ಸದಸ್ಯ ಶ್ರೀರಾಮುಲು ಹೇಳಿದ್ದಾರೆ.

ಈ ಹಿಂದೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಜಿ.ಕರುಣಾಕರ ರೆಡ್ಡಿ ನಂತರ ಹರಪನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು.

‘ಹರಪನಹಳ್ಳಿ ಕ್ಷೇತ್ರ ಅಭಿವೃದ್ಧಿ ಪಡಿಸಲು ಕರುಣಾಕರ ರೆಡ್ಡಿ ವಿಫಲರಾಗಿದ್ದಾರೆ. ಶಾಸಕರಾಗಿ ಎರಡು ಬಾರಿ ಸ್ಥಳೀಯರು ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಸ್ಥಳೀಯ ಅಭ್ಯರ್ಥಿಗೇ ಟಿಕೆಟ್‌ ನೀಡಬೇಕು ಎಂದು ಟಿಕೆಟ್‌ ಆಕಾಂಕ್ಷಿಗಳು ನಡೆಸುತ್ತಿರುವ ಹೋರಾಟ ನ್ಯಾಯಬದ್ಧವಾಗಿದೆ’ ಎಂದು ಶ್ರೀರಾಮುಲು ಹೇಳಿದ್ದಾರೆ.

ADVERTISEMENT

‘ಸ್ಥಳೀಯರು ನಡೆಸುತ್ತಿರುವ ಹೋರಾಟ ರಾಜ್ಯ ಅಧ್ಯಕ್ಷ ಯಡಿಯೂರಪ್ಪ ಮತ್ತು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಗಮನಕ್ಕೆ ಬಂದಿದೆ. ಟಿಕೆಟ್‌ ಹಂಚಿಕೆ ಕುರಿತು ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಲಿದೆ.

ಒಂದು ವೇಳೆ ಪಕ್ಷ ಕರುಣಾಕರ ರೆಡ್ಡಿ ಅವರಿಗೆ ಟಿಕೆಟ್‌ ಕೊಟ್ಟಲ್ಲಿ ಪಕ್ಷದ ಪರ ಕೆಲಸ ಮಾಡುತ್ತೇನೆ. ಟಿಕೆಟ್‌ ಆಕಾಂಕ್ಷಿಗಳಾದ ಎನ್‌.ಕೊಟ್ರೇಶ್‌, ಜಿ.ನಂಜನಗೌಡ, ಮಹಾಬಲೇಶ್ವರ ಗೌಡ ಅವರಲ್ಲಿ ಯಾರಿಗಾದರೂ ಟಿಕೆಟ್‌ ನೀಡಿದಲ್ಲಿ ಅವರನ್ನೂ ಬೆಂಬಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.