ADVERTISEMENT

ಹೈಟೆಕ್‌ ಶೌಚಾಲಯಕ್ಕೆ ಸಿಗದ ನಿವೇಶನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 7:32 IST
Last Updated 16 ಏಪ್ರಿಲ್ 2017, 7:32 IST

ಮಲೇಬೆನ್ನೂರು:  ಪುರಸಭೆಯಲ್ಲಿ ನಾಮನಿರ್ದೇಶನ ಸದಸ್ಯರು ಶಿಫಾರಸು ಮಾಡುವ ಕಾಮಗಾರಿಗಳಿಗೆ ಅನುದಾನ ಒದಗಿಸುತ್ತಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಾಮನಿರ್ದೇಶನ ಸದಸ್ಯ ಎ.ಕೆ. ನರಸಿಂಹಪ್ಪ ಹಾಗೂ ಚುನಾಯಿತ ಸದಸ್ಯರ ನಡುವೆ ಶನಿವಾರ ಮಾತಿನ ಚಕಮಕಿ ನಡೆಯಿತು.14ನೇ ಹಣಕಾಸು ಯೋಜನೆಯಡಿ ₹ 16 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್‌ ಶೌಚಾಲಯ ನಿರ್ಮಾಣ ಕಾಮಗಾರಿಗೆ ಸ್ಥಳದ ಅಭಾವವಿದೆ. ಜಿಗಳಿ ವೃತ್ತದ ಬಳಿ ಗುರುತಿಸಿರುವ ನಿವೇಶನ ಕಂದಾಯ ಇಲಾಖೆ ವಶದಲ್ಲಿದೆ.

ಅಲ್ಲಿ ಶೌಚಾಲಯ ನಿರ್ಮಿಸಲು ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯಬೇಕು ಎಂದು ಪುರಸಭೆ ಅಧಿಕಾರಿಗಳು ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದರು.
‘ಅನುದಾನವನ್ನು 23 ವಾರ್ಡ್‌ಗಳಿಗೂ ಸಮಾನವಾಗಿ ಹಂಚಿಕೆ ಮಾಡಬೇಕು’ ಎಂದು ಸದಸ್ಯರಾದ ದಾದವಲಿ, ಯುಸೂಫ್ ಆಗ್ರಹಿಸಿದರು.ನಾಮನಿರ್ದೇಶನ ಸದಸ್ಯ ಎ.ಕೆ. ನರಸಿಂಹಪ್ಪ, ‘ಸಾರ್ವಜನಿಕ ರುದ್ರಭೂಮಿ ನಿರ್ಮಾಣಕ್ಕೆ ಏಕೆ ಅನುದಾನ ನೀಡಿಲ್ಲ’ ಎಂದು ಪ್ರಶ್ನಿಸಿದರು.

‘ರುದ್ರಭೂಮಿ ನಿವೇಶನ ಒತ್ತುವರಿಯಾಗಿದೆ. ಅದಕ್ಕೆ ಆವರಣ ಗೋಡೆ ನಿರ್ಮಿಸಿದ ಬಳಿಕ ಅನುದಾನ ಒದಗಿಸಲಾಗುವುದು’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಭಾನುವಳ್ಳಿ ಸುರೇಶ್ ಪ್ರತಿಕ್ರಿಯಿಸಿದರು.‘ನಾಮನಿರ್ದೇಶನ ಸದಸ್ಯರ ಮಾತಿಗೆ ಸಭೆಯಲ್ಲಿ ಗೌರವ ನೀಡಲಾಗುತ್ತಿಲ್ಲ’ ಎಂದು ನಾಮನಿರ್ದೇಶನ ಸದಸ್ಯರಾದ ನಿಜಲಿಂಗಪ್ಪ, ಹನುಮಂತಪ್ಪ, ಜ್ಯೋತಿ ಚಂದ್ರಶೇಖರ್’ ವಿಷಾದಿಸಿದರು.

ADVERTISEMENT

ಇದಕ್ಕೆ ಜೆಡಿಎಸ್‌ ಸದಸ್ಯ ಯುಸೂಫ್ ಪ್ರತಿಕ್ರಿಯಿಸಲು ಮುಂದಾದಾಗ, ‘ಎಲ್ಲ ವಿಷಯಕ್ಕೂ ತಲೆ ಹಾಕಿ ಉತ್ತರ ನೀಡುತ್ತಿರುವುದು ಒಳ್ಳೆಯದಲ್ಲ’ ಎಂದು ಜ್ಯೋತಿ ಆಕ್ಷೇಪಿಸಿದರು.ಮಹಾಂತಸ್ವಾಮಿ ಅವರು ನಾಮನಿರ್ದೇಶನ ಸದಸ್ಯರು ಸಲಹೆ–ಸೂಚನೆಗಳನ್ನು ಮಾತ್ರ ನೀಡಬಹುದು’ ಎಂದು ಹೇಳಿದಾಗ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಇದರಿಂದ ಬೇಸತ್ತು ಎ.ಕೆ. ನರಸಿಂಹಪ್ಪ ಸಭಾತ್ಯಾಗ ಮಾಡಿದರು.

ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಬೆಸ್ಕಾಂ ಹಣ ಪಾವತಿ ಮಾಡಿ ಹೊಸದಾಗಿ ಕೊರೆದಿರುವ ಕೊಳವೆಬಾವಿಗೆ ಮೋಟರ್‌ ಅಳವಡಿಸಬೇಕು. ಹಂದಿಗಳನ್ನು ಪಟ್ಟಣದಿಂದ ಹೊರಕ್ಕೆ ಸಾಗಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್ ಖರೀದಿಸಲು, ಸ್ವಚ್ಛತಾ ಸಾಮಗ್ರಿ ಖರೀದಿಸಲು ಕರೆದಿರುವ ಗುತ್ತಿಗೆಗೆ ಸಭೆ ಒಪ್ಪಿಗೆ ಸೂಚಿಸಿತು.ಪುರಸಭೆ ಅಧ್ಯಕ್ಷೆ ಡಿ.ಕೆ. ಅಂಜಿನಮ್ಮ, ಉಪಾಧ್ಯಕ್ಷ ಬಿ.ಎಂ.ಚನ್ನೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಭಾನುವಳ್ಳಿ ಸುರೇಶ್, ಮುಖ್ಯಾಧಿಕಾರಿ ಚಂದ್ರಶೇಖರ್, ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.