ಹುಬ್ಬಳ್ಳಿ: ಇಲ್ಲಿನ ಭವಾನಿ ನಗರದ ರಾಯರಮಠದಲ್ಲಿ ಭಾನುವಾರ ಭವ್ಯ ವೇದಿಕೆಯಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಭಕ್ತರನ್ನು ಆಕರ್ಷಿಸಿತು.
ಬೆಂಗಳೂರಿನ ಶ್ರೀವಾರಿ ಪ್ರತಿಷ್ಠಾನದ ವೆಂಕಟೇಶಮೂರ್ತಿ ಅವರ ತಂಡವು ವರ್ಣರಂಜಿತ ವೇದಿಕೆಯಲ್ಲಿ ಸಂದರ್ಭಕ್ಕೆ ತಕ್ಕಂತೆ ಹಾಡು, ಭಜನೆ ಮತ್ತು ಕಲ್ಯಾಣದ ಕೈಂಕರ್ಯವನ್ನು ಸಾಲಂಕೃತವಾಗಿ ನಡೆಸಿಕೊಟ್ಟರು.
ತಿರುಪತಿಯಲ್ಲಿ ವೆಂಕಟೇಶ್ವರನಿಗೆ ನಡೆಯುವ ನಿತ್ಯ ಕಲ್ಯಾಣೋತ್ಸವ ತದ್ರೂಪವಾಗಿಯೇ ರಾಯರ ಮಠದಲ್ಲಿ ಅನಾವರಣಗೊಳಿಸಿದ ವೈಕಾಸನ ಋಷಿ ವಿಧಿಯಂತೆ ನಡೆದುಕೊಂಡು ಬಂದ ಕಲ್ಯಾಣೋತ್ಸವ ಪಟ್ಟಾಭಿಷೇಕಕ್ಕೆ ಕಲಶವಿಟ್ಟಿತು.
ಮೊದಲು ಪದ್ಮಾವತಿ, ವೆಂಕಟೇಶ್ವರ, ಮಹಾಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಸನ್ನಿವೇಶದಲ್ಲಿ ಮಂಗಲ ವಾದ್ಯಗಳು ಮೊಳಗಿದವು. ಜಾಗಟೆ, ಶಂಖ, ನಿನಾದಗಳು ಭಕ್ತಿ ಪರವಶತೆಯನ್ನು ಹೆಚ್ಚಿಸಿದವು. ಇಲ್ಲಿಂದ ಆರಂಭವಾದ ಬೀಸುವ ಕಲ್ಲು, ಒರಳುಕಲ್ಲು ಪೂಜೆ, ಗಣಪತಿ ಪೂಜೆಯ ಸಂದರ್ಭದಲ್ಲಿ ತೂರಿಬಂದ ಸುವ್ವಿ ಸುವ್ವಿ ಹಾಡುಗಳು ಭಕ್ತರನ್ನು ಪರವಶಗೊಳಿಸಿದವು.
ಮಂಗಲಾಷ್ಟಕ ಶ್ಲೋಕದೊಂದಿಗೆ ಅಕ್ಷತಾರೋಪಣ ಆರತಿ ಹೀಗೆ ನಾನಾ ಸೇವೆಗಳ ಮೂಲಕ ಶ್ರೀವಾರಿ ಪ್ರತಿಷ್ಠಾನದ ತಂಡ ಆಗಾಗ ಭಕ್ತರನ್ನು ಸಮ್ಮೋಹನಗೊಳಿಸಿತು.
ಕೊನೆಯಲ್ಲಿ ನಡೆದ ಏಕಾಂತ ಸೇವೆಯಲ್ಲಿ ಮೌನ ಧ್ಯಾನ, ಭಜನೆಯ ಓಂಕಾರ ವೇದಿಕೆಯಲ್ಲಿ ಆಲಾಪಿಸಿದವು. ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಹಲವು ಗಣ್ಯರು ಕಲ್ಯಾಣೋತ್ಸವವನ್ನು ವಿವರಿಸಿದರು.