ಧಾರವಾಡ: ಇಲ್ಲಿನ ತಪೋವನ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭಾನುವಾರ ಮಧ್ಯಾಹ್ನ ಕಂಟೇನರ್ ಟ್ರಕ್ ಮತ್ತು ಸಿಮೆಂಟ್ ಮಿಕ್ಸರ್ ವಾಹನದ ನಡುವೆ ಅಪಘಾತ ಸಂಭವಿಸಿದ್ದರಿಂದ ಒಂದು ಕಿಲೋಮೀಟರ್ಗೂ ಹೆಚ್ಚು ದೂರ ವಾಹನ ದಟ್ಟಣೆ ಉಂಟಾಗಿತ್ತು.
‘ಧಾರವಾಡದ ಕಡೆ ಬರುತ್ತಿದ್ದ ಸಿಮೆಂಟ್ ಮಿಕ್ಸರ್ ವಾಹನ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದಾಗಿ ಲಾರಿ ಬಲಕ್ಕೆ ತಿರುಗಿದೆ. ಇದರಿಂದಾಗಿ ಎದುರಿನಿಂದ ಬರುತ್ತಿದ್ದ ಕಂಟೇನರ್ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಎರಡೂ ಲಾರಿಯ ಚಾಲಕರು ಹಾಗೂ ಕ್ಲೀನರ್ಗಳಿಗೆ ಪೆಟ್ಟಾಗಿದೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿಗಳನ್ನು ರಸ್ತೆ ಪಕ್ಕಕ್ಕೆ ತರಲು ಕ್ರೇನ್ ಇಲ್ಲದಿದ್ದ ಕಾರಣ ಹೆದ್ದಾರಿಯಲ್ಲಿ ವಾಹನಗಳು ಸಾಲಾಗಿ ನಿಂತಿದ್ದವು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಿಲೋಮೀಟರ್ಗೂ ಹೆಚ್ಚು ದೂರ ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಂತಿಮವಾಗಿ ನಾಲ್ಕು ಗಂಟೆ ಸುಮಾರಿಗೆ ಸ್ಥಳಕ್ಕೆ ಕ್ರೇನ್ ತರಿಸಿದ ಪೊಲೀಸರು ಲಾರಿಗಳನ್ನು ರಸ್ತೆ ಪಕ್ಕಕ್ಕೆ ಎಳೆದು ನಿಲ್ಲಿಸಿದರು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರಕರಣ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.
ಲಾರಿಗೆ ಬೈಕ್ ಡಿಕ್ಕಿ: ಸವಾರ ಸಾವು
ಧಾರವಾಡ: ಗೋವಾ ರಸ್ತೆಯ ಮ್ಯಾಂಗೋ ಮೂಡ್ಸ್ ಹೋಟೆಲ್ ಬಳಿ ಶನಿವಾರ ತಡರಾತ್ರಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಧಾರವಾಡದಿಂದ ಹಳಿಯಾಳ ಕಡೆ ಹೊರಟಿದ್ದ ಲಾರಿ, ದಾರಿ ತಪ್ಪಿ ಗೋವಾ ರಸ್ತೆ ಕಡೆ ಹೊರಟಿತ್ತು. ಸರಿಯಾದ ವಿಳಾಸ ಪಡೆದು ರಸ್ತೆಯ ನಡುವೆ ತಿರುಗಿಸಿಕೊಳ್ಳುತ್ತಿದ್ದಾಗ ಮುಗದ ಕಡೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮುಗದ ಗ್ರಾಮದಲ್ಲಿ ಪ್ರಕಾಶ ಅವರೊಳ್ಳ (40) ಮೃತಪಟ್ಟಿದ್ದಾರೆ. ಇವರು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.