ADVERTISEMENT

‘ಏಕೀಕರಣಕ್ಕೆ ಬಸರಿಗಿಡದ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 6:51 IST
Last Updated 10 ನವೆಂಬರ್ 2017, 6:51 IST

ಗದಗ: ‘ಕರ್ನಾಟಕ ಏಕೀಕರಣ ಹೋರಾಟಕ್ಕೆ ಬಸರಿಗಿಡದ ವೀರಪ್ಪನವರು ಅಂದು ₹ 25 ಸಾವಿರ ನೀಡುವ ಮೂಲಕ ಇತಿಹಾಸದಲ್ಲಿ ಅಜರಾಮರ ಆಗಿದ್ದಾರೆ’ ಎಂದು ವಿದ್ಯಾದಾನ ಸಮಿತಿ ಎಂ.ಬಿ.ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಚಾರ್ಯೆ ಗಂಗಾಬಾಯಿ ಪವಾರ ಹೇಳಿದರು.

ಕರ್ನಾಟಕ ಇತಿಹಾಸ ಅಕಾಡೆಮಿ ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜು ಆಶ್ರಯದಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ‘ಕರ್ನಾಟಕ ಏಕೀಕರಣಕ್ಕೆ ಬಸರಿಗಿಡದ ವೀರಪ್ಪನವರ ಕೊಡುಗೆ’ ಎಂಬ ವಿಷಯದ ಕುರಿತು ಅವರು ಪ್ರಬಂಧ ಮಂಡಿಸಿದರು.

‘ಬಸರಿಗಿಡದ ವೀರಪ್ಪನವರು ಆ ಕಾಲದ ಬರಗಾಲದ ಬಂಟ ಎಂದೇ ಹೆಸರಾಗಿದ್ದರು. ಬರ ಪ್ರದೇಶಗಳಲ್ಲಿ ರೈತರ ನೋವಿಗೆ ಸ್ಪಂದಿಸಿ, ದಾನ, ಧರ್ಮ ಮಾಡುತ್ತ ಬಂದಿದ್ದ ಅವರನ್ನು ಕರ್ನಾಟಕದ ಫೋರ್ಡ್ ಎಂದು ಕರೆಯಲಾಗುತ್ತಿತ್ತು. ಕರ್ನಾಟಕ ಏಕೀಕರಣ ಚಳುವಳಿಯ ವಿವಿಧ ಸಭೆ, ಸಮ್ಮೇಳನಗಳಿಗೆ ದಾನ ಹಾಗೂ ಅಗತ್ಯ ಪ್ರೋತ್ಸಾಹ ನೀಡುವ ಮೂಲಕ ಏಕೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ’ ಎಂದರು.

ADVERTISEMENT

‘ಏಕೀಕರಣ ಹೋರಾಟದಲ್ಲಿ ಸ್ಫೂರ್ತಿ ನೀಡಿದ ಸಾಹಿತಿಗಳು ಮತ್ತು ಹೋರಾಟಗಾರರೊಂದಿಗೆ ಪರೋಕ್ಷವಾಗಿ ಬೆಂಬಲ ನೀಡಿದ ಮಹಾನ್ ದಾನಿಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ’ ಸಂಶೋಧಕ ಡಾ.ಎಫ್.ಟಿ.ಹಳ್ಳಿಕೇರಿ ಅಭಿಪ್ರಾಯಪಟ್ಟರು. ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಆರ್.ಬೇಲೇರಿ ಹಾಗೂ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.