ಮುಂಡರಗಿ: ಬೇರೆಯವರ ಜಮೀನುಗಳಲ್ಲಿ ಕೂಲಿ ಮಾಡಿ, ಕೂಲಿ ದೊರೆಯದೆ ಇದ್ದ ಸಂದರ್ಭದಲ್ಲಿ ಮನೆ, ಮನೆಗಳಿಗೆ ತೆರಳಿ ಭಿಕ್ಷೆ ಎತ್ತುವ ಜಂಗಮರೊಬ್ಬರ ಮಗ ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 612 (ಶೇ 97.92) ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ತಂದೆ ತಾಯಿ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ.
ತಾಲ್ಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿ ವೀರಯ್ಯ ಚನ್ನಯ್ಯ ದೂಪದಮಠ ಈ ಸಾಧನೆ ಮಾಡುವ ಮೂಲಕ ಈಗ ಎಲ್ಲರ ಮೆಚ್ಚುಗೆ ಗಳಿಸಿದ್ದಾನೆ.‘ಕೂಲಿ ಮಾಡಿ, ಭಿಕ್ಷೆ ಎತ್ತಿ ಮಗನ್ನು ಓದಿಸಿದ್ದು ಸಾರ್ಥಕವಾಯಿತು’ ಎಂದು ಅವರ ತಂದೆ, ತಾಯಿ ಹೆಮ್ಮೆ ಪಡುತ್ತಿದ್ದಾರೆ.
ಹಿರೇವಡ್ಡಟ್ಟಿ ಗ್ರಾಮದಲ್ಲಿ ಕೂಲಿ ಮಾಡಿ ಬದುಕು ಸಾಗಿಸುತ್ತಿರುವ ವೀರಯ್ಯನ ತಂದೆ ಚನ್ನಯ್ಯ ಮತ್ತು ತಾಯಿ ನಿಂಬಕ್ಕ ಹೇಗಾದರೂ ಮಾಡಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಛಲಕ್ಕೆ ಬಿದ್ದು ಮಕ್ಕಳನ್ನು ಓದಿಸುತ್ತಿದ್ದಾರೆ.
ಕಲಿಕೆಯಲ್ಲಿ ಸದಾ ಮುಂದಿದ್ದ ವೀರೇಶನನ್ನು ಮೊರಾರ್ಜಿ ವಸತಿ ಶಾಲೆಗೆ ಸೇರಿಸಿದರು. ತಾವು ಕೂಲಿ ಮಾಡಿ ಬದುಕು ಸಾಗಿಸಿದರು. ಕಲಿಕೆಯಲ್ಲಿ ಚುರುಕಾಗಿದ್ದ ವೀರೇಶನ ಬುದ್ದಿವಂತೆಕೆಗೆ ಮೊರಾರ್ಜಿ ವಸತಿ ಶಾಲೆಯ ಸಿಬ್ಬಂದಿ ಉತ್ತಮ ಮಾರ್ಗದರ್ಶನ ಮಾಡಿದರು.
ಅದೆಲ್ಲದರ ಫಲವಾಗಿ ಇಂದು ವೀರೇಶ ದೂಪದಮಠ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆಯುವಂತಾಯಿತು. ಮುಂದೆ ಯುಪಿಎಸ್ಸಿ ಪರೀಕ್ಷೆ ಬರೆಯಬೇಕು ಎನ್ನುವುದು ವೀರೇಶನ ಗುರಿಯಾಗಿದ್ದು, ಅವನ ಇಚ್ಛೆಯನ್ನು ಈಡೇರಿಸಲು ಪೋಷಕರು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.