ಗದಗ: ಲಿಂಗಾಯತ ಪ್ರತ್ಯೇಕ ಧರ್ಮ ಸಾಂವಿಧಾನಿಕ ಮಾನ್ಯತೆಗೆ ಒತ್ತಾಯಿಸಿ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ರಾಷ್ಟ್ರೀಯ ಬಸವ ಸೇನೆಯ ಸದಸ್ಯರಿಂದ ಗದುಗಿನ ಗಾಂಧಿ ವೃತ್ತದಲ್ಲಿ ಶುಕ್ರವಾರ ಅಹೋರಾತ್ರಿ ಧರಣಿ ನಡೆಯಿತು.
‘ಲಿಂಗಾಯತ ಸ್ವತಂತ್ರ ಧರ್ಮವಾಗುವುದರಿಂದ ನಿಮಗೆ ಆಗುವ ತೊಂದರೆ ಏನು, ನೀವೇಕೆ ಅಡ್ಡಗಾಲು ಹಾಕುತ್ತಿದ್ದೀರಿ’ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎಸ್.ಹರ್ಲಾಪೂರ ಅವರು ವೀರಶೈವರೆಂದು ಹೇಳಿಕೊಳ್ಳುವ ಸ್ವಾಮೀಜಿಗಳನ್ನು ಪ್ರಶ್ನಿಸಿದರು.
‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಸಿಕ್ಕರೆ ಲಿಂಗಾಯತ ಉಪಪಂಗಡಗಳ ಒಕ್ಕೂಟದ ಎಲ್ಲ ಯುವಕರಿಗೆ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳು ಸಿಗುತ್ತವೆ. ಈ ಸಂದರ್ಭದಲ್ಲಿ ನೀವು ಅಡ್ಡಿಪಡಿಸುವುದು ಸರಿಯಲ್ಲ’ ಎಂದರು.
‘ಜೈನ, ಬೌದ್ಧ ಹಾಗೂ ಸಿಖ್ ಧರ್ಮದಂತೆ ಲಿಂಗಾಯತ ಸ್ವತಂತ್ರ ಧರ್ಮವಾಗುವ ಅರ್ಹತೆ ಪಡೆದಿದೆ ಎಂದು ನ್ಯಾ.ನಾಗಮೋಹನ್ ದಾಸ್ ಸಮಿತಿಯ ವರದಿ ತಿಳಿಸಿದೆ. ರಾಜ್ಯ ಸರ್ಕಾರ ಈ ವರದಿಯನ್ನು ಸ್ವೀಕರಿಸಿ, ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದರು.
ಬಸವ ಕೇಂದ್ರದ ಕಾರ್ಯದರ್ಶಿ ಪ್ರಕಾಶ ಅಸುಂಡಿ, ಪ್ರೊ.ಡಿ.ಬಿ.ಗವಾನಿ, ಷರೀಫ್ ಬಿಳೆಯಲಿ ಮಾತನಾಡಿದರು.
ಸತ್ಯಾಗ್ರಹದಲ್ಲಿ ರಾಷ್ಟ್ರೀಯ ಪಂಚಮಸಾಲಿ ಅಧ್ಯಕ್ಷ ಪ್ರಭಣ್ಣ ಹುಣಶಿಕಟ್ಟಿ, ಶೇಖಣ್ಣ ಕವಳಿಕಾಯಿ, ಎಸ್.ಎಸ್.ರಡ್ಡೇರ, ಶಿವಕುಮಾರ ರಾಮನಕೊಪ್ಪ, ವೀರಣ್ಣ ಬೇವಿನ ಮರದ, ದಾನಪ್ಪ ತಡಸದ, ಹಾಲಪ್ಪ ತುರಕಾಣಿ, ಮುತ್ತಣ್ಣ ನವಲಗುಂದ, ಎಚ್.ಡಿ.ಡಬರಿ, ಸತೀಶ ಹುಣಕುಂಟಿ, ಜಾಗತಿಕ ಲಿಂಗಾಯತ ಮಹಾಸಭಾ ವೇದಿಕೆ, ರಾಷ್ಟ್ರೀಯ ಬಸವಸೇನೆ, ಲಿಂಗಾಯತ ಉಪಪಂಗಡಗಳ ಒಕ್ಕೂಟ, ಬಸವ ದಳ, ಬಸವ ಕೇಂದ್ರ, ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.