ಮುಂಡರಗಿ: ಮನುಷ್ಯರಲ್ಲಿ ವಿಶಾಲ ಮನೋಭಾವನೆ ಮೂಡಿದಾಗ ಮಾತ್ರ ಸಮಾಜ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತದೆ. ಅಸಂಘಟಿತರಾಗಿರುವ ಸಮಾಜ ಬಾಂಧವರೆಲ್ಲ ಒಂದಾಗಿ ಸಮಾಜದ ಒಳಿತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ ಎಂದು ಅನ್ನದಾನ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ಹೇಳಿದರು.
ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘವು ತಾಲ್ಲೂಕಿನ ಡೋಣಿ ಗ್ರಾಮದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಏರ್ಪಡಿಸಿದ್ದ ಸಮಾಜ ಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ರಾಜ್ಯ ಮತ್ತು ದೇಶವನ್ನಾಳಿದ ವಿವಿಧ ಪಕ್ಷಗಳು ಹಡಪದ ಸಮಾಜದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ನಮ್ಮ ಹಕ್ಕುಗಳಿಗಾಗಿ ನಾವೆಲ್ಲ ಹೋರಾಟ ಕೈಗೊಳ್ಳಬೇಕಾಗಿದೆ. ಈ ನೆಲದಲ್ಲಿ ಹುಟ್ಟಿ ಬೆಳೆದ ನಮ್ಮ ಮಕ್ಕಳಿಗೆ ಸರಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಅದನ್ನು ನಿವಾರಿಸುವ ನಿಟ್ಟನಲ್ಲಿ ನಾವೆಲ್ಲ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ಡೋಣಿಯ ನಂದಿವೇರಿ ಮಠದ ಶಿವುಕುಮಾರ ಸ್ವಾಮಿಜಿ ಅವರು ಮಾತನಾಡಿ, ಹಡಪದ ಅಪ್ಪಣ್ಣನವರು ನೂರಾರು ವಚನಗಳನ್ನು ರಚಿಸಿ ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಬಸವಣ್ಣನ ಆಪ್ತ ಕಾರ್ಯದರ್ಶಿಯಾಗಿ ನಿಷ್ಠೆ ಹಾಗೂ ಪ್ರಮಾಣಿಕತೆಯಿಂದ ಸಮಾಜ ಸೇವೆ ಮಾಡಿದ್ದಾರೆ. ಹಡಪದ ಸಮಾಜದವರು ತಮ್ಮ ಕಿಳರಿಮೇಯನ್ನು ಬದಿಗೊತ್ತಿ ಸಮಾಜದಲ್ಲಿ ಎತ್ತರದ ಸ್ಥಾನಗಳನ್ನು ಗಳಿಸಿದಾಗ ಮಾತ್ರ ಸಮಾಜವು ತಾನಾಗಿಯೇ ಉದ್ಧಾರವಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ದೇವು ಹಡಪದ ಮಾತನಾಡಿ, ಸಮಾಜ ಬಾಂಧವರೆಲ್ಲ ಪರಿಶುದ್ಧ ಕಾಯಕದಿಂದ ಚಾರಿತ್ರ್ಯವಂತರಾಗಿ ಬಾಳಬೇಕು. ಸಮಾಜ ಬಾಂಧವರು ಆಂತರಿಕ ಕಲಹಗಳನ್ನು ಬದಿಗೊತ್ತಿ ಸಮಾಜದ ಹಿತ ಕಾಯಬೇಕು. ಕಾಯಕ, ಸಹಕಾರ ಮತ್ತು ಪ್ರೀತಿಯಿಂದ ಜಗತ್ತನ್ನೇ ಜಯಿಸಬಹುದು. ಆದ್ದರಿಂದ ಹಡಪದ ಸಮಾಜದ ಪ್ರತಿಯೊಬ್ಬರು ಕಾಯಕ ಯೋಗಿಗಳಾಗಬೇಕು ಎಂದು ತಿಳಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ವ್ಹಿ.ಬಿ.ಕೊಣ್ಣೂರ ಮಾತನಾಡಿ, ಸಮಾಜದ ಪ್ರಗತಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲು ತಾವು ಸದಾ ಸಿದ್ಧರಿದ್ದು, ಸಮಾಜದ ಹಿರಿಯರು ಸೂಕ್ತ ಮಾರ್ಗದರ್ಶನ ಮಾಡಬೇಕು. ವಚನದ ಮಹತ್ವವನ್ನು ಅರಿಯಲು ಸಮಾಜದ ಪ್ರತಿಯೊಬ್ಬರ ಮನೆಯಲ್ಲಿ ವಚನಗೋಷ್ಠಿ ನಡೆಸಲು ಚಿಂತನೆ ನಡೆಡಸಿದ್ದು, ಸದ್ಯದಲ್ಲಿಯೇ ಅದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು. ಎ. ವ್ಹಿ. ಪ್ರಭು ಮಾತನಾಡಿದರು.
ಶ್ರೀನಿವಾಸ ಹಡಪದ, ಕಲ್ಲೇಶಪ್ಪ ಕೂಡಗುಂಟಿ, ನಾಗರಾಜ ಡಂಬಳ, ಪರಶುರಾಮ ಹಡಪದ, ಮಂಜುನಾಥ ಹಡಪದ, ಶೇಖರಪ್ಪ ಹಡಪದ, ಸೋಮಣ್ಣ ಹಡಪದ, ವೀರಣ್ಣ ಹಡಪದ, ಮಲ್ಲಿಕಾರ್ಜುನ ಹಡಪದ, ಬಸವರಾಜ ಹಡಪದ, ಡಿ.ಬಿ ಹಳ್ಳಿಕೇರಿ, ಬಸನಗೌಡ ಪಾಟೀಲ್, ಹಾವೇರಿ ಜಿಲ್ಲಾಧ್ಯಕ್ಷ ಬಸವರಾಜ ದೊಡ್ಡಮನಿ, ಕರ್ಜಗಿ ಗ್ರಾ.ಪಂ.ಅಧ್ಯಕ್ಷ ಶಿವುಕುಮಾರ ಕಾಯಕದ ಮೊದಲಾದವರು ಹಾಜರಿದ್ದರು.
ಸಂಗೀತಾ ಹಡಪದ ಪ್ರಾರ್ಥನೆ ಹಾಡಿದರು. ಶೇಖಪ್ಪ ಮುಂಡವಾಡ ಸರ್ವರನ್ನು ಸ್ವಾಗತಿಸಿದರು. ಗೌರಿ ಹಡಪದ ಕಾರ್ಯಕ್ರಮ ನಿರೂಪಿಸಿದರು. ಕಲ್ಲಪ್ಪ ಹಡಪದ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.