ADVERTISEMENT

‘ಮಹದಾಯಿ ಹೆಸರಲ್ಲಿ ರಾಜಕೀಯ ಸಲ್ಲ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 9:42 IST
Last Updated 3 ಜನವರಿ 2018, 9:42 IST

ನರಗುಂದ: ‘ಮಹದಾಯಿ ನಿಲ್ಲದ ಹೋರಾಟ.ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದರೆ, ಇದರ ಹೆಸರಲ್ಲಿ ರಾಜಕೀಯ ನಡೆದು ರೈತರ ಹಿತ ಬಲಿಗೊಡುವ ಕೆಲಸ ಬೇಡ’ ಎಂದು ಹೋರಾಟ ಸಮಿತಿ ಉಪಾಧ್ಯಕ್ಷ ರಮೇಶ ನಾಯ್ಕರ ಹೇಳಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 903ನೇ ದಿನ ಮಂಗಳವಾರ ಅವರು ಮಾತನಾಡಿದರು.

‘ಮಹದಾಯಿಗಾಗಿ ರೈತ ಕುಲ ಒಂದಾಗಬೇಕಿದೆ. ರೈತರ ಹಿತ ಕಾಯುವ ಜನಪ್ರತಿನಿಧಿಗಳಿಗೆ ಮಾತ್ರ ಮಾನ್ಯತೆ ನೀಡಬೇಕು. ರೈತ ಸಂಘಟನೆಗಳು ಜಾಗೃತಗೊಳ್ಳಬೇಕು’ ಎಂದರು.

‘ಮಹದಾಯಿಗೆ ಇಡೀ ಕರ್ನಾಟಕದ ಜನತೆ ಬೆಂಬಲ ನೀಡಿದ್ದಾರೆ. ಈ ಭಾಗದ ರೈತರ ಹಿತ ದೃಷ್ಟಿಯಿಂದ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಒಂದಾಗಿ ಇದಕ್ಕೆ ಪರಿಹಾರ ಒದಗಿಸಬೇಕು. ಪರಸ್ಪರ ಕಚ್ಚಾಟದಲ್ಲಿ ರೈತರ ಹಿತ ಬಲಿಕೊಡದೇ, ನಮ್ಮ ಪಾಲಿನ ನೀರನ್ನು ಪಡೆಯಲು ನ್ಯಾಯಮಂಡಳಿ ಮುಂದೆ ಸಮರ್ಥವಾಗಿ ವಾದ ಮಂಡಿಸಬೇಕು. ಪ್ರಧಾನಿ ಮಧ್ಯಸ್ಥಿಕೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು’ ಎಂದು ನಾಯ್ಕರ ಹೇಳಿದರು.

ADVERTISEMENT

ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಮಾತನಾಡಿದರು. ‘ನಮ್ಮ ನ್ಯಾಯಯುತ ಬೇಡಿಕೆ ಈಡೇರಬೇಕು. ಪ್ರಧಾನಿ ಕರ್ನಾಟಕದ ಬಗ್ಗೆ ಗಮನಹರಿಸಬೇಕು’ ಎಂದು ಒತ್ತಾಯಿಸಿದರು. ಹನಮಂತ ಸರನಾಯ್ಕರ, ಎಸ್‌.ಬಿ.ಜೋಗಣ್ಣವರ, ಎಂ.ಎಂ.ನಂದಿ, ಯಲ್ಲಪ್ಪ ಗುಡದೇರಿ, ಬಸಮ್ಮ ಐನಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.