ಗಜೇಂದ್ರಗಡ: ಶಿವಾಜಿ ಮಹಾರಾಜರು ಭರತ ಖಂಡ ಕಂಡ ಅಪ್ರತಿಮ ದೇಶಪ್ರೇಮಿ. ಅವರು ಇಲ್ಲದೇ ಹೋಗಿದ್ದರೆ ನಾವು ಈಗ ಹಿಂದೂ ರಾಷ್ಟ್ರದಲ್ಲಿ ಬದುಕಲು ಸಾಧ್ಯವೇ ಇರುತ್ತಿರಲಿಲ್ಲ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದ ಶಿವಾಜಿ ಪೇಟೆಯಲ್ಲಿ ಸೋಮವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ 391ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ಮರಾಠ ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ಇಡೀ ಭರತ ಖಂಡಕ್ಕೆ ಸೇರಿದ ವ್ಯಕ್ತಿ ಎಂದರು.
ಶಿವಾಜಿಯ ವಿಚಾರಧಾರೆ, ಆದರ್ಶ ಮತ್ತು ಕೊಡುಗೆಯನ್ನು ಶಾಲಾ -ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಜನಾಂಗಕ್ಕೆ ತಿಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಪುರಸಭೆ ಸದಸ್ಯ ಎಂ.ಎಸ್.ಹಡಪದ ಮಾತನಾಡಿ, ಶಿವಾಜಿ ಮಹಾರಾಜರು ದೇಶ ಕಂಡ ಅಪ್ರತಿಮ ವೀರ, ದೇಶ ಭಕ್ತ. ಅಂದು ಶತ್ರುಗಳ ಅಟ್ಟಹಾಸವನ್ನು ಸಮರ್ಥವಾಗಿ ಎದುರಿಸಿ ದೇಶದ ಸಂಸ್ಕೃತಿ, ಹಿಂದೂ ಸಮಾಜ, ಮಹಿಳೆಯರ ಮಾನ ಪ್ರಾಣ ರಕ್ಷಿಸಿದರು ಎಂದರು.
ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಸಮಾಜದ ಮುಖಂಡ ರಾಜೇಂದ್ರ ಘೋರ್ಪಡೆ, ಪ್ರಶಾಂತ ಪಾಟೀಲ, ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಜೀವನ ಗಾಥೆಗಳನ್ನೊಳಗೊಂಡ ಪುಸ್ತಕಗಳನ್ನು ಇಂತಹ ಸಮಾರಂಭಗಳಲ್ಲಿ ಮಕ್ಕಳಿಗೆ ವಿತರಿಸುವುದರಿಂದ ಮಕ್ಕಳು ಶಿವಾಜಿ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂದರು.
ಈ ವೇಳೆ ಮರಾಠ ಸಮಾಜದ ಗುರುಗಳಾದ ಬಲರಾಮಗಿರಿ ಶಂಕರಾಗಿರಿ ಗೋಸಾವಿಮಠ, ಶೇಕಪ್ಪ ರಾಮಜಿ, ತಹಶೀಲ್ದಾರ್ ಶಿವಕುಮಾರ ವಸ್ತ್ರದ, ಮಂಗಳಾ ದೇಶಮುಖ, ರಮೇಶ ಮರಾಠಿ, ಶ್ರೀಕಾಂತ ಅವಧೂತ, ಬಾಳು ಪವಾರ, ಲಕ್ಷ್ಮಣ ದುಮ್ಮಾಳ, ಆರ್.ಟಿ.ಇಂಗಳೆ, ಪರಶುರಾಮ ಚಿಟಗಿ, ದೇವಪ್ಪ ರಾಮಜಿ, ಚಂದ್ರು ಜಾನಾಯಿ, ಶಿವಣ್ಣ ಹಾಳಕೇರಿ, ರಾಮಣ್ಣ ಮಾಲಗಿತ್ತಿ, ಬಾಸ್ಕರ ರಾಯಬಾಗಿ, ಅಶೋಕ ವನ್ನಾಲ ಇದ್ದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.