ಅರಸೀಕೆರೆ: ನಗರದ ರುದ್ರಗುಡಿ ಬೀದಿ ಬದಿಯಿರುವ ವೀರಭದ್ರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಜಂಪೋತ್ಸವ ಹಾಗೂ ಕೆಂಡೋತ್ಸವ ಸಂಭ್ರಮದಿಂದ ನಡೆಯಿತು.ಕಡೂರು ತಾಲ್ಲೂಕಿನ ಕೆ.ಬಿದರೆ ದೊಡ್ಡ ಮಠದ ಪ್ರಭುಕುಮಾರ ಸ್ವಾಮೀಜಿ ಮತ್ತು ಹೊನ್ನವಳ್ಳಿ ಕರಿಸಿದ್ದೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ದೇವಾಲಯದ ಪ್ರಧಾನ ಅರ್ಚಕ ಬಸವರಾಜ್ ಮತ್ತು ಯತೀಶ್ ಶಾಸ್ತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ–ವಿಧಾನಗಳು ನಡೆದವು.
ವೀರಭದ್ರ ಸ್ವಾಮಿಗೆ ಜಲ, ಕ್ಷೀರಾಭಿಷೇಕ, ಎಳನೀರು, ಮೊಸರು, ರುದ್ರಾಭಿಷೇಕಗಳು ನಡೆದವು.ನಂತರ ದೇವಾಲಯದ ಮುಂಭಾಗ ನಡೆದ ವೀರಭದ್ರಸ್ವಾಮಿ ಕೆಂಡೋತ್ಸವದಲ್ಲಿ ತಲೆಯ ಮೇಲೆ ದುಗ್ಗಳದ ಬಟ್ಟಲು ಹೊತ್ತ ಮಹಿಳೆಯರು ಕೆಂಡ ಹಾಯುವ ಮೂಲಕ ಹರಕೆ ತೀರಿಸಿದರು.
ಉತ್ಸವ: ಪುಷ್ಪಾಲಂಕೃತ ಮಂಟಪದಲ್ಲಿ ವೀರಭದ್ರಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಿಕನಗರದ ಪ್ರಮುಖ ರಸ್ತೆಗಳಲ್ಲಿ ಮಂಗಲ ಕರಡೇವು ವಾದ್ಯ ಹಾಗೂ
ವೀರಭದ್ರನ ಕುಣಿತದೊಂದಿಗೆ ಉತ್ಸವ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಶಾಸಕ ಎ.ಎಸ್.ಬಸವರಾಜ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಎನ್.ವಿದ್ಯಾಧರ್, ದೇವಾಲಯ ಆಡಳಿತ ಮಂಡಳಿ ಸದಸ್ಯರಾದ ಎಂ.ಜಗದೀಶ್, ಬಿ.ವಿ.ವೀರಭದ್ರಪ್ಪ, ವಿಜಯಮ್ಮ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.