ADVERTISEMENT

ತಿಂಗಳ ಮುಂಚಿತವಾಗಿಯೇ ಪಿಯು ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 8:59 IST
Last Updated 20 ನವೆಂಬರ್ 2017, 8:59 IST

ಹಾವೇರಿ: ‘ಪ್ರಸಕ್ತ ಶೈಕ್ಷಣಿಕ ವರ್ಷದ ಪಿಯು ಕಾಲೇಜುಗಳ ಹಾಗೂ ಎಸ್‌.ಎಸ್‌.ಎಲ್‌.ಸಿ. ವಾರ್ಷಿಕ ಪರೀಕ್ಷೆ ಒಂದು ತಿಂಗಳ ಮುಂಚಿತವಾಗಿಯೇ ನಡೆಯುತ್ತವೆ. ಆದ್ದರಿಂದ, ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ಸಿದ್ಧತೆ ನಡೆಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಗರದ ಮುನ್ಸಿಪಲ್‌ ಹೈಸ್ಕೂಲ್‌ನಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಹಾಗೂ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

2018ರ ಮಧ್ಯದಲ್ಲಿ ವಿಧಾನಸಭೆ ಚುನಾಚಣೆ ನಡೆಯುವ ಕಾರಣಕ್ಕೆ ಪರೀಕ್ಷಗಳನ್ನು ಒಂದು ತಿಂಗಳ ಮುಂಚಿತವಾಗಿಯೇ ನಡೆಸಲಾಗುತ್ತಿದೆ. ನಿಮ್ಮ ಪರೀಕ್ಷೆ ಮುಗಿದ ಬಳಿಕ ನಮ್ಮ ಪರೀಕ್ಷೆ ನಡೆಯುತ್ತದೆ ಎಂದರು.

ADVERTISEMENT

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಪಠ್ಯ ವಿಷಯದ ಜೊತೆಗೆ ಸಹಪಠ್ಯ ವಿಷಯಗಳಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಾ ಮನೋಭಾವದಿಂದ ಭಾಗವಹಿಸಬೇಕು. ಸ್ಪರ್ಧೆಯಲ್ಲಿ ಗೆಲ್ಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯವಾಗಿರುತ್ತದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ₹ 2.36 ಕೋಟಿ ಮಂಜೂರಾಗಿ, ಈಗಾಗಲೇ ನೂತನ ಕಟ್ಟಡ ಪ್ರಗತಿಯಲ್ಲಿದೆ. ಮಂದಿನ ಶೈಕ್ಷಣಿಕ ವರ್ಷದಿಂದ ತರಗತಿಗಳನ್ನು ನೂತನ ಕಟ್ಟದಲ್ಲಿಯೇ ಪ್ರಾರಂಭಿಸಲಾಗುವುದು ಎಂದರು.

ಪ್ರಾಚಾರ್ಯ ಎಚ್‌.ಎಸ್‌.ಚಿನ್ನಿಕಟ್ಟಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಬೌದ್ಧಿಕ ಮಟ್ಟ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರತಿ ಶಾಲಾ ಕಾಲೇಜುಗಳಲ್ಲಿ, ಪಠ್ಯ ವಿಷಯದ ಜೊತೆಗೆ ಸಹಪಠ್ಯ ವಿಷಯಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸಲು ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ ಎಂದರು.

ಸಭೆಗೆ ವಿಳಂಬ: ಬೆಳಿಗ್ಗೆ 9.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಬರದೇ ಇರುವ ಕಾರಣಕ್ಕೆ, ಉದ್ಘಾಟನೆ ಮಾಡದೇ ಕಾರ್ಯಕ್ರಮವನ್ನು 10.15ಕ್ಕೆ ಪ್ರಾರಂಭಿಸಲಾಯಿತು.

ಸ್ವಾಗತ ಬಳಿಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹಾಗೂ ಪ್ರಾಚಾರ್ಯ ಎಚ್‌.ಎಸ್‌.ಚಿನ್ನಿಕಟ್ಟಿ ಮಾತನಾಡಿದರು. ಆಗಲೂ ಬರದೇ ಇರುವ ಸಚಿವರನ್ನು ಕಾದು ಕಾದು ಅತಿಥಿಗಳು ಬೇಸತ್ತರು.

11.15ಕ್ಕೆ ದಿಢೀರ್‌ ಬಂದ ಸಚಿವರು ವೇದಿಕೆಗೆ ಬರದೇ ಕಾಲೇಜಿನ ಆವರಣದಲ್ಲಿ ಬೇರೆಯವರೊಂದಿಗೆ ಮಾತುಕತೆ ಆರಂಭಿಸಿದರು. ಆಗ ಅತಿಥಿಗಳು ಸಚಿವರನ್ನು ಕರೆಯುವಂತೆ ಸಂಯೋಜಕರಿಗೆ ಹೇಳಿದರು. ಆಗಲೂ ಸಚಿವರು ವೇದಿಕೆಗೆ ಬರಲು ವಿಳಂಬ ಮಾಡಿದರು.

ಆಗ ಪ್ರಾಚಾರ್ಯ ಎಚ್‌.ಎಸ್‌.ಚಿನ್ನಿಕಟ್ಟಿ ಸಚಿವರನ್ನು ಕರೆತರಲು ತೆರಳಿದರು, ಬಳಿಕ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹಾಗೂ ಕೊನೆಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿಯವರೇ ಸಚಿವರು ಇದ್ದಲ್ಲಿಗೆ ಹೋದರು. ಆಗ ಸಚಿವರು ದಿಢೀರ್‌ ವೇದಿಕೆಗೆ ಬಂದು 11.25ಕ್ಕೆ ಕಾರ್ಯಕ್ರಮವನ್ನು ಉದ್ಟಾಟಿಸಿ, ಬಳಿಕ ಮಾತನಾಡಿದರು.

ಸ್ಪರ್ಧೆಗಳು: ಕನ್ನಡ ಪ್ರಬಂಧ, ಇಂಗ್ಲಿಷ್‌ ಪ್ರಬಂಧ, ಕನ್ನಡ ಭಾಷಣ, ಇಂಗ್ಲಿಷ್‌ ಭಾಷಣ, ಭಕ್ತಿ ಗೀತೆ, ಭಾವ ಗೀತೆ, ಜಾನಪದ ಗೀತೆ, ರಸಪ್ರಶ್ನೆ, ಏತಪಾತ್ರಾಭಿನಯ ಹಾಗೂ ಚಿತ್ರಕಲೆ ಸ್ಪರ್ಧೆಗಳು ನಡೆದವು. ಪರಮೇಶಣ್ಣ ಶಿವಣ್ಣನವರ, ಪ್ರಕಾಶ ಬಾರ್ಕೆರ, ಎಸ್‌.ಎಫ್‌.ನೆಗಳೂರು, ಎಸ್‌.ಪಿ.ದೊಡಮನಿ, ಉಮೇಶ ಪಾಟೀಲ್‌ ಹಾಗೂ ಪ್ರಮೋದ ನೆಲವಾಗಿಲ ಇದ್ದರು.

* * 

ಹಾವೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್‌.ಎಸ್‌.ಚಿನ್ನಿಕಟ್ಟಿಯವರು ಇದೇ 27ರಂದು ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ಜವಾಬ್ದಾರಿ ವಹಿಸಲಿದ್ದಾರೆ.
ರುದ್ರಪ್ಪ ಲಮಾಣಿ
ಜಿಲ್ಲಾ ಉಸ್ತುವಾರು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.