ADVERTISEMENT

ಸರ್ಕಾರದ ಸಾಧನೆ ಮನೆ–ಮನೆಗೆ ತಲುಪಿಸಿ

ಹಿರೇಕೆರೂರ: ತಾಲ್ಲೂಕು ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ: ಅಜ್ಜಂಪೀರ್ ಖಾದ್ರಿ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 8:44 IST
Last Updated 24 ಜುಲೈ 2017, 8:44 IST
ಹಿರೇಕೆರೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಉದ್ಘಾಟಿಸಿದರು
ಹಿರೇಕೆರೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಉದ್ಘಾಟಿಸಿದರು   

ಹಿರೇಕೆರೂರ: ‘ಪಕ್ಷದ ಸಿದ್ಧಾಂತ ಹಾಗೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು  ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ  ಸೈಯದ್ ಅಜ್ಜಂಪೀರ್ ಖಾದ್ರಿ ಕರೆ ನೀಡಿದರು.

ಪಟ್ಟಣದ ಗುರು ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಬೂತ್ ಮಟ್ಟದ ಪದಾಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ಕಾಂಗ್ರೆಸ್‌ ಸರ್ಕಾರ ಜನತೆಗೆ ನೀಡಿದ ಯೋಜನೆಗಳು ಮತ್ತು ಕೊಡುಗೆಗಳನ್ನು ಮನೆ–ಮನೆಗೆ ತಲುಪಿಸಲು ಶ್ರಮಿಸಬೇಕು. ಆ ಮೂಲಕ ಪಕ್ಷವನ್ನು ಬೇರೆ ಮಟ್ಟದಿಂದ ಬಲಪಡಿಸಬೇಕು’ ಎಂದರು.

ADVERTISEMENT

ಮಾಜಿ ಶಾಸಕ ಬಿ.ಸಿ.ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಕಾಂಗ್ರೆಸ್ ಸರ್ಕಾರ ಎಲ್ಲ ಸಮುದಾಯದವರನ್ನು ಸಮಾನವಾಗಿ ಕಾಣುವ ಜೊತೆಗೆ ಎಲ್ಲರಿಗೂ ಸೌಲಭ್ಯಗಳನ್ನು ನೀಡಿದೆ. ಸಿದ್ದರಾಮಯ್ಯ ಅವರು ದಿಟ್ಟ ಆಡಳಿತ ನಡೆಸುವ ಮೂಲಕ ಈಗಾಗಲೇ 150 ಭರವಸೆಗಳನ್ನು ಈಡೇರಿಸಿದ್ದಾರೆ’ ಎಂದರು.

‘ಅನ್ನಭಾಗ್ಯ, ಕೃಷಿಭಾಗ್ಯ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ರೈತರ ಸಾಲಮನ್ನಾ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲ ಸಮುದಾಯಗಳಿಗೆ ತಲುಪಿಸಿದ್ದಾರೆ’ ಎಂದರು.

ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್ ಮಾತನಾಡಿ, ‘ನಮ್ಮದು ನುಡಿದಂತೆ ನಡೆದ ಸರ್ಕಾರ.  ಚುನಾವಣೆಗೂ ಮುನ್ನ ನೀಡಿದ್ದ ಆಶ್ವಾಸನೆಗಳ ಪೈಕಿ, ನಾಲ್ಕು ವರ್ಷಗಳ ಆಡಳಿತದಲ್ಲಿ ಶೇ 90ರಷ್ಟು ಭರವಸೆಗಳನ್ನು ಈಡೇರಿಸಿದ ಆತ್ಮ ಸಂತೋಷ ನಮಗಿದೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿದರು.

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕರೇಗೌಡ ಸಣ್ಣಕ್ಕಿ, ಮಂಜುಳಾ ಬಾಳಿಕಾಯಿ, ಅಶೋಕ ಪಾಟೀಲ, ಡಿ.ಸಿ.ಪಾಟೀಲ, ಆರ್.ಎಂ. ಕುಬೇರಪ್ಪ, ಆರ್.ಎನ್.ಗಂಗೋಳ, ಜಿ.ಶಿವನಗೌಡ್ರ, ಎಸ್.ಕೆ.ಕರಿಯಣ್ಣನವರ, ಪ್ರಕಾಶ ಬನ್ನಿಕೋಡ, ಮಾದೇವಕ್ಕ ಗೋಪಕ್ಕಳ್ಳಿ, ವನಜಾ ಪಾಟಿಲ, ಸೃಷ್ಟಿ ಪಾಟೀಲ, ಶಿವಲೀಲಾ ರಂಗಕ್ಕನವರ, ಸುಲೋಚನಾ ಶಾಂತನಗೌಡ್ರ, ಬಸವ ರಾಜ ಕಾಲ್ವೀಹಳ್ಳಿ, ರಮೇಶ ಹಡಗದ, ಕುಸುಮಾ ಬಣಕಾರ, ಜಗದೀಶ ತಂಬಾ ಕದ, ಪಿ.ಎಸ್.ಗವಿಯಪ್ಪನವರ, ಗುರು ಶಾಂತಪ್ಪ ಎತ್ತಿನಹಳ್ಳಿ, ಹನುಮಂತಪ್ಪ ಮೇಗಳಮನಿ ಹಾಜರಿದ್ದರು.

*
ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮುಖಂಡರಿಗೆ ದಲಿತರು ನೆನಪಾಗುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಎಲ್ಲ ವರ್ಗದವರನ್ನು ಸಮಾನವಾಗಿ ಕಂಡಿದೆ.
–ಬಿ.ಸಿ.ಪಾಟೀಲ,
ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.