ಶಿಗ್ಗಾವಿ: ವ್ಯಸನಮುಕ್ತ ಸಮಾಜದಿಂದ ಸುಭದ್ರ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಿದೆ. ಯುವಕರು ದುಶ್ಚಟಗಳಿಂದ ದೂರವಾಗಬೇಕು ಎಂದು ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಎಚ್.ಬಿ. ಪಂಚಾಕ್ಷರಯ್ಯ ಹೇಳಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ಎನ್ಎಸ್ಎಸ್ ಘಟಕ, ಯುವ ರೇಡ್ಕ್ರಾಸ್ ಘಟಕ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮತ್ತು ರೂಪಾಂತರ ಕ್ರಿಯೇಟಿವ್ ಪೀಪಲ್ ಸಂಸ್ಥೆ ಸಹಯೋಗದಲ್ಲಿ ನಡೆದ ಮದ್ಯ ವ್ಯಸನ ವಿರೋಧಿ ಜನಜಾಗೃತಿ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಧೂಮಪಾನ, ಮದ್ಯಪಾನ, ಹೆರಾಯಿನ್, ಬ್ರೌನ್ಶುಗರ, ಸೇವನೆಯಿಂದ ಜೀವಕ್ಕೆ ಅಪಾಯ. ಮದ್ಯದ ಅಮಲಿನಲ್ಲಿ ಸಂಭವಿಸುವ ಅಪಘಾತಗಳಿಂದಾಗುವ ಅಂಗವಿಕಲತೆ, ಪ್ರಾಣಹಾನಿಯಿಂದ ಅನೇಕ ಕುಟುಂಬಗಳು ಹಾಳಾಗಿವೆ. ಆಸ್ತಿ, ಅಂತಸ್ತು ಕಳೆದುಕೊಂಡರೆ ಮತ್ತೆ ಗಳಿಸಬಹುದು. ಆದರೆ ಮದ್ಯ ವ್ಯಸನಕ್ಕೆ ಬಲಿಯಾದರೆ ಜೀವನವೇ ಹಾಳಾಗುವುದು ಎಂಬ ವಿಚಾರವನ್ನು ಅರಿಯಬೇಕು ಎಂಬುದನ್ನು ನಾಟಕದ ಮೂಲಕ ಪ್ರಸ್ತುತ ಪಡಿಸಲಾಯಿತು.
ಕಲಾವಿದರಾದ ಅಮರದೇವ, ಮಂಜುನಾಥ, ದಾನೇಶ್ವರ, ಲತಾ ಪಟೇಲ, ಉಪನ್ಯಾಸಕರಾದ ಪ್ರೊ. ಡಿ.ಎಸ್.ಸೊಗಲದ, ಎಮ್.ಜಿ. ರಂಗಣ್ಣನವರ, ಸಂತೋಷಕುಮಾರ ಕಟಕೆ, ಯಮುನಾ ಕೊಣೆಸರ್, ಬಿ.ಸಿ. ಬಜ್ಜಿ, ಸುಜಾತಾ ಕಡ್ಲಿ, ಕೆ.ಪಿ. ಬೆಣಗೇರಿ, ಬಸವರಾಜ ಸಣ್ಣಬಸಪ್ಪನವರ, ಜಿ.ಬಿ. ಹೊಳ್ಳೆಮ್ಮನವರ, ವಿಜಯ್ ಗುಡಗೇರಿ, ಎಂ. ಕುಮಾರ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.