ಕಲಬುರ್ಗಿ: ನಗರದಲ್ಲಿ ಗುರುವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆ ಸುರಿಯಿತು. ಸುಮಾರು ರಾತ್ರಿ 9.30ಕ್ಕೆ ಮಳೆ ಆರಂಭವಾಯಿತು. ಗಾಳಿ ಇಲ್ಲದ ಕಾರಣ ಉತ್ತಮ ಮಳೆಯಾಗಿದೆ.
ನಗರದ ಹಲವೆಡೆ ಚರಂಡಿಗಳು ತುಂಬಿ ಹರಿದವು. ರಸ್ತೆಯಲ್ಲಿ ಧಾರಾಕಾರ ನೀರು ಹರಿಯಿತು. ಮಳೆಯಲ್ಲಿಯೇ ಕೆಲವರು ಸಂಚರಿಸಿದರು. ಮಳೆಯ ನಂತರ ವಾತಾವರಣ ತಂಪಾಯಿತು.
ರೈಲ್ವೆ ನಿಲ್ದಾಣದ ಛಾವಣಿ ಸೋರಿಕೆ: ರೈಲ್ವೆ ನಿಲ್ದಾಣದ ಛಾವಣಿಯಲ್ಲಿ ಹಲವೆಡೆ ರಂಧ್ರಗಳಾಗಿದ್ದು, ಗುರುವಾರ ರಾತ್ರಿ ಮಳೆ ಬಂದ ಸಂದರ್ಭ ಪ್ಲಾಟ್ ಫಾರಂ ಮೇಲೆ ನೀರು ಸುರಿದು ಪ್ರಯಾಣಿಕರು ಪರದಾಡುವಂತಾಗಿತ್ತು.
ಪ್ಲಾಟ್ ಫಾರಂನ ಕಂಬಗಳ ಸುತ್ತ ಪ್ರಯಾಣಿಕರು ಕುಳಿತು ಕೊಳ್ಳಲು ಅನುಕೂಲವಾಗುವಂತೆ ಕಟ್ಟೆ ನಿರ್ಮಿಸಲಾಗಿದೆ. ಕಂಬಗಳ ಬಳಿಯೇ ಛಾವಣಿ ನೀರು ಸುರಿದಿದ್ದರಿಂದ ಜನರು ಎದ್ದು ನಿಲ್ಲುವಂತಾಗಿತ್ತು. ಅಲ್ಲದೆ ರಾತ್ರಿ 9.30ರ ವೇಳೆ ಬೆಂಗಳೂರು ಮತ್ತಿತರ ಕಡೆಗೆ ಹೋಗುವ ಹಲವು ರೈಲುಗಳು ಬರುವುದರಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿತ್ತು. ಇದರಿಂದ ಜನರು ನಿಲ್ಲಲೂ ಸ್ಥಳಾವಕಾಶವಿಲ್ಲದೆ ಪರದಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.