ಕಕ್ಕೇರಾ: ಈ ಭಾಗದಲ್ಲಿ ಭತ್ತದ ಉತ್ತಮ ಇಳುವರಿ ಬಂದಿದೆ. ಆದರೆ ಭತ್ತಕ್ಕೆ ಕೀಟಭಾದೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈಚೆಗೆ ಸುರಿದ ಅಕಾಲಿಕ ಮಳೆ, ತಂಪು ಹವೆ ಭತ್ತಕ್ಕೆ ಕೀಟಭಾದೆ ತಗುಲಲು ಕಾರಣ. ಉತ್ತಮ ಬೆಲೆ ಇದ್ದರೂ ಕೀಟಭಾದೆಯ ಭತ್ತಕ್ಕೆ ಬೆಲೆ ಕಡಿಮೆ ಕೇಳುತ್ತಾರೆ ಎಂಬುದು ರೈತರ ಅಳಲು.
‘ಸದ್ಯ ಭತ್ತ ಕ್ವಿಂಟಲ್ಗೆ ₹1350 ರಿಂದ ₹1450 ಇದೆ. ವ್ಯಾಪಾರಸ್ಥರು ನಮ್ಮ ಹೊಲಕ್ಕ ಕೀಟ (ದ್ವಾಮಿ) ಹೆಚ್ಚಾಗಿದೆ ಎಂದು ಹೇಳಿದಾಗ, ಅವರು ನೀಡಿದ ಕ್ರಿಮಿನಾಶಕ ಸಿಂಪಡಿಸಿದರೂ ಹುಳ ಸಾಯಲಿಲ್ಲ. ಎಂತಹ ಕ್ರಿಮಿನಾಶಕ ನೀಡಿದ್ದಾರೋ ತಿಳಿಯದು. ಕೀಟಬಾಧೆಯಿಂದ ಬೆಳೆಗಳು ನಾಶವಾಗಿವೆ. ಈಗ ಉತ್ತಮ ಬೆಲೆಯೂ ಸಿಗುತ್ತಿಲ್ಲ. ಬೇಸಾಯಕ್ಕೆ ಖರ್ಚು ಮಾಡಿದ ಹಣವೂ ವಾಪಸಾಗುವ ನಿರೀಕ್ಷೆ ಇಲ್ಲ’ ಎಂದು ರೈತ ಮಾನಶಪ್ಪ ಗುರಿಕಾರ ಹೇಳಿದರು.
‘ಹೋಬಳಿ ಕೇಂದ್ರಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ನೇರವಾಗಿ ರೈತರಿಂದ ಬೆಳೆದ ಬೆಳೆಗಳನ್ನು ಖರೀದಿಸುವ ವ್ಯವಸ್ಥೆ ಮಾಡಬೇಕು. ಶೀಘ್ರ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಮುಂದಾಗಬೇಕು’ ಎಂದು ರೈತ ತಿಪ್ಪಣ್ಣ ಶಾಂತಪೂರ ಒತ್ತಾಯಿಸಿದರು.
* *
ಕಷ್ಟಪಟ್ಟು ಬೆಳೆ ಬೆಳೆದ ಅನ್ನದಾತನಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸರ್ಕಾರ ಬೆಲೆ ನಿಗದಿ ಮಾಡಿ, ರೈತರಿಗೆ ಸಹಾಯಹಸ್ತ ಚಾಚಬೇಕು
ಹಣಮಂತರಾಯಗೌಡ
ಅಧ್ಯಕ್ಷ, ರೈತ ಸಂಘ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.