ADVERTISEMENT

ಕೌಶಲ ತರಬೇತಿಗೆ ಆದ್ಯತೆ ನೀಡಿ

ಉದ್ಯೋಗ ಮೇಳ ಉದ್ಘಾಟಿಸಿದ ರೀನಾ ಪ್ರಕಾಶ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 11:16 IST
Last Updated 24 ಮಾರ್ಚ್ 2018, 11:16 IST

ವಿರಾಜಪೇಟೆ: ‘ಪ್ರತಿಯೊಬ್ಬರು ಶಿಕ್ಷಣಕ್ಕೆ ಪೂರಕವಾಗಿ ಕೌಶಲ ತರಬೇತಿ ಪಡೆದರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಾಧ್ಯ’ ಎಂದು ಕಾಫಿ ಮಂಡಳಿಯ ಉಪಾಧ್ಯಕ್ಷೆ ರೀನಾ ಪ್ರಕಾಶ್ ಅಭಿಪ್ರಾಯಪಟ್ಟರು.

ಪಟ್ಟಣದ ಕಾವೇರಿ ಕಾಲೇಜು ಮತ್ತು ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಉದ್ಯೋಗ ಮೇಳ -2018’ಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ವಯಂ ಉದ್ಯೋಗದಿಂದ ಬದುಕು ರೂಪಿಸಿಕೊಳ್ಳಲು ವಿಫುಲ ಅವಕಾಶವಿದೆ. ಪದವಿ ನಂತರ ಬಳಿಕ ಉದ್ಯೋಗ ಅರಸುವ ಬದಲು ಕೌಶಲ ತರಬೇತಿ ಪಡೆದು ಸ್ವಉದ್ಯೋಗ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಮಕ್ಕಳ ವೈದ್ಯ ಡಾ. ನವೀನ್ ಅವರು, ‘ಯುವಜನರೇ ದೇಶದ ಸಂಪನ್ಮೂಲ ಹಾಗೂ ಭರವಸೆ. ಗ್ರಾಮೀಣ ಯುವಜನರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಯಾವುದೇ ಕಾರಣಕ್ಕೂ ಹಿಂಜರಿಯಬಾರದು’ ಎಂದರು.

ಪ್ರಾಂಶುಪಾಲ ಸಿ.ಎಂ.ನಾಚಪ್ಪ ಅಧ್ಯಕ್ಷತೆ ವಹಿಸಿದ್ದು, ‘ ಕೌಶಲದ ಸದ್ಬಳಕೆಗೆ ಸೂಕ್ತ ವೇದಿಕೆ ಇಲ್ಲದಿರುವುದು ವಿಷಾದನೀಯ. ಯುವಜನರು ಮೌಲ್ಯ ಮತ್ತು ಸಂಸ್ಕೃತಿ ಮರೆಯುತ್ತಿರುವುದು ಗೊಂದಲಕ್ಕೆ ಕಾರಣ’ ಎಂದರು.

ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಸದಸ್ಯ ವೆಂಕಟೇಶ್, ‘ಕೌಶಲ ಅಭಿವೃದ್ಧಿ’ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಸಂಯೋಜಕ ಮತ್ತು ಬಿಬಿಎ ವಿಭಾಗದ ಎಲ್.ಆರ್. ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.