ನಾಪೋಕ್ಲು: ಪಟ್ಟಣದಲ್ಲಿ ಪರವಾನಗಿ ಇಲ್ಲದೆ ವಾಹನ ಚಲಿಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್ಐ ಬಿ.ಎಸ್.ವೆಂಕಟೇಶ್ ಎಚ್ಚರಿಸಿದ್ದಾರೆ.
ಇಲ್ಲಿನ ಭಗವತಿ ಕಲ್ಯಾಣ ಮಂಟಪದಲ್ಲಿ ಈಚೆಗೆ ನಡೆದ ಪೊಲೀಸ್ ಬೀಟ್ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ತಿಂಗಳು ಬೀಟ್ ಸಭೆ ನಡೆಸಲು ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ. ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿಗೆ 31 ಗ್ರಾಮಗಳು ಒಳಪಡುತ್ತವೆ. ಸಿಬ್ಬಂದಿ ಕೊರತೆಯಿಂದ ಆರು ಗ್ರಾಮಗಳಿಗೆ ಓರ್ವ ಬೀಟ್ ಪೊಲೀಸ್ ಅನ್ನು ನೇಮಿಸಿಲಾಗಿದೆ. ಒಟ್ಟು 18 ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಕ್ಕೆ ಓರ್ವ ಬೀಟ್ ಪೊಲೀಸ್ ನೇಮಕ ಮಾಡಲಾಗುವುದು ಎಂದರು. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಹೊರ ರಾಜ್ಯಗಳಿಂದ ಬಂದ ಸುಮಾರು ಒಂಬತ್ತು ಸಾವಿರ ಕೂಲಿ ಕಾರ್ಮಿಕರ ಹೆಸರನ್ನು ನೋಂದಾಯಿಸಿಕೊಳ್ಳಲಾಗಿದೆ. ಇನ್ನೂ ನೋಂದಾಯಿಸದ ಬೇರೆ ರಾಜ್ಯಗಳ ಕೂಲಿ ಕಾರ್ಮಿಕರ ಹೆಸರನ್ನು ಕೂಡಲೇ ನೋಂದಾಯಿಸಬೇಕೆಂದು ಅವರು ಈ ಸಂದರ್ಭದಲ್ಲಿ ಸೂಚಿಸಿದರು.
ಅಸ್ಸಾಂ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಕಾರ್ಮಿಕರ ಬಗ್ಗೆ ಎಚ್ಚರಿಕೆ ಯಿಂದ ಇರಬೇಕು ಎಂದು ಮಾಲೀಕರಿಗೆ ಸೂಚಿಸಿದರು. ಪಟ್ಟಣದಲ್ಲಿನ ಸಂಚಾರ ಸಮಸ್ಯೆಯ ಬಗ್ಗೆ ಗ್ರಾಮಸ್ಥರಾದ ಮುಂಡಂಡ ಶಾಂತ, ಕುಂದೈರಿರ ರಾಜು ದೇವಯ್ಯ, ಎನ್.ಎಸ್.ಉದಯಶಂಕರ್, ಕುಂಬಂಡ ಕೇಶವ, ಮಿಟ್ಟು, ಕೊಂಬಂಡ ವಿಠಲ ಮಾತನಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್ಐ, ಪಟ್ಟಣದಲ್ಲಿ ಇನ್ನು ಮುಂದೆ ಸಂಚಾರ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್, ಪೊಲೀಸ್ ಸಿಬ್ಬಂದಿ ಭವಾನಿ, ಪ್ರತಿಮಾ, ಅಶ್ರಫ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.