ADVERTISEMENT

ಅಭಿವೃದ್ಧಿ ಕಾಮಗಾರಿ: ಅವ್ಯವಹಾರ ಆರೋಪ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 7:16 IST
Last Updated 17 ನವೆಂಬರ್ 2017, 7:16 IST

ಬಂಗಾರಪೇಟೆ: ಪಟ್ಟಣ ಹಾಗೂ ವಿಧಾನಸಭಾ ಕ್ಷೇತ್ರದ್ಯಂತ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಮುಖಂಡ ಎಂ.ನಾರಾಯಣಸ್ವಾಮಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗೆ ದೂರು ನೀಡಿದೆ.

ಕೋಲಾರದಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರನ್ನು ಅಭಿನಂದಿಸಿದ ನಂತರ ಮಾತನಾಡಿ, ‘ಪಟ್ಟಣದ ಮೂಲಕ ಹಾದುಹೋಗುವ ಕೆಜಿಎಫ್‌ -ಕೋಲಾರ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದೆ. ವಾಹನ ಸವಾರರು ಸೇರಿದಂತೆ ಪಾದಚಾರಿಗಳು ಸಂಚರಿಸಲು ಅನಾನುಕೂಲವಾಗಿದೆ. ಅಲ್ಲದೆ ಕ್ಷೇತ್ರದ ಹಲ ಕಾಮಗಾರಿ
ಗಳಲ್ಲೂ ಅವ್ಯವಹಾರ ನಡೆದಿದೆ ಎಂದು ಅಂಕಿ ಅಂಶದ ವಿವರ ನೀಡಿದರು.

ದ್ವಿಪಥ ರಸ್ತೆಯಲ್ಲಿ ಮಳೆ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಮಾಡಿಲ್ಲ. ಪಟ್ಟಣದಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಹಲವೆಡೆ ಭಾರಿ ವಾಹನಗಳು ಚಲಿಸಲು ಹರಸಾಹಸ ಪಡಬೇಕು. ರಸ್ತೆ ಉದ್ದಕ್ಕೂ ನಿರ್ಮಿಸಿದ್ದ ಚರಂಡಿಯನ್ನು ಅಲ್ಲಲ್ಲಿ ಹೊಡೆದು ಹಾಕಲಾಗಿದೆ. ಕೆಲವೆಡೆ ರಸ್ತೆಯ ಎರಡೂ ಬದಿ ಸಪರ್ಪಕ ಪಾದಚಾರಿ ರಸ್ತೆಗಳು ನಿರ್ಮಿಸಿಲ್ಲ ಎಂದು ದೂರಿದರು.

ADVERTISEMENT

ಪಟ್ಟಣದ ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಗೋಲ್ಮಾಲ್ ನಡೆದಿದೆ. ಕೆರೆಯಲ್ಲಿ ಹೂಳು ತೆಗೆಯದೆ ಅನುದಾನ ದುರುಪಯೋಗ ಪಡಿಸಿಕೊಳ್ಳಲಾಗಿದೆ. ವಾಕಿಂಗ್ ಪಾಥ್ ಮಾಡುವ ಮೂಲಕ ದೊಡ್ಡಕೆರೆಯನ್ನು ಕುಂಟೆಯಾಗಿ ಮಾರ್ಪಡಿಸಲಾಗಿದೆ ಎಂದು ಆರೋಪಿಸಿದರು.

ಕೆರೆ ಒತ್ತುವರಿ ತೆರವುಗೊಳಿಸುವ ಬದಲು ಒತ್ತುವರಿದಾರರಿಗೆ ಅನುವು ಮಾಡಲಾಗಿದೆ. ಪಟ್ಟಣ ಹೊರವಲಯದ ಅತ್ತಿಗಿರಿಕೊಪ್ಪ ಕೆರೆ ಅಭಿವೃದ್ಧಿಯಲ್ಲೂ ಅವ್ಯವಹಾರ ಎಸಗಲಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಮೇಲೆ ಆರೋಪಗಳ ಸುರಿಮಳೆಗೈದರು.

ಪಟ್ಟಣದ ಮಿನಿವಿಧಾನಸೌಧ ಮುಂದೆ ಅಕ್ರಮವಾಗಿ ಪೆಟ್ಟಿಗೆ ಅಂಗಡಿಗಳು ನಿರ್ಮಿಸಲು ಮುಂದಾಗಿದ್ದು, ಹಿಂದಿನ ಜಿಲ್ಲಾಧಿಕಾರಿಗೆ ದೂರು ನೀಡಿದ ನಂತರ ನಿಲ್ಲಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಮುಂಭಾಗ ಹಾಗೂ ಕೆನರಾ ಬ್ಯಾಂಕ್ ಮುಂಭಾಗ ಅಂಗಡಿಗಳ ನಿರ್ಮಾಣಕ್ಕೆ ಯತ್ನಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ನಿಯೋಗದಲ್ಲಿ ಜಿ.ಪಂ ಸದಸ್ಯರಾದ ಬಿ.ವಿ.ಮಹೇಶ್, ಶ್ರೀನಿವಾಸಗೌಡ, ಹನುಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.