ಬಂಗಾರಪೇಟೆ: ‘ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರ ₹ 200 ಕೋಟಿ ಮೀಸಲಿರಿಸಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಜೀವಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಹಿಂದುಳಿದ, ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿ, ‘ಯುವಕರಿಗಾಗಿ ಸರ್ಕಾರ ಕೌಶಲ ತರಬೇತಿ ಕೇಂದ್ರಗಳನ್ನು ತೆರೆದಿದೆ’ ಎಂದರು.
‘ಕೌಶಲ ತರಬೇತಿ ಪಡೆದ ಯುವಕ, ಯುವತಿಯರು ಸ್ವಯಂ ಉದ್ಯೋಗ ಆರಂಭಿಸಿ ಇತರರಿಗೆ ಸ್ಫೂರ್ತಿಯಾಗಬೇಕು’ ಎಂದರು.
‘ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಮಾಡಿದೆ. ಆದರೆ ಬಹುತೇಕರಿಗೆ ಸರ್ಕಾರದ ಸೌಲಭ್ಯದ ಬಗ್ಗೆ ಮಾಹಿತಿ ತಿಳಿದಿಲ್ಲ. ತಿಳಿದರೂ ಕೆಲವರು ಸೌಲಭ್ಯ ಪಡೆಯಲು ಮುಂದೆ ಬಾರದಿರುವುದು ವಿಷಾದದ ಸಂಗತಿ’ ಎಂದರು.
‘ಸಂಬಂಧಿಸಿದ ಇಲಾಖೆ, ಸಂಸ್ಥೆಗಳು ಸೌಲಭ್ಯಗಳ ಕುರಿತು ಅರಿವು ಮೂಡಿಸಬೇಕು. ಸೌಲಭ್ಯಗಳನ್ನು ಅರ್ಹರ ಮನೆಗೆ ತಲುಪಿಸುವ ಕೆಲಸ ಮಾಡಬೇಕು. ಸರ್ಕಾರದಿಂದ ಅಲ್ಪ ಸಂಖ್ಯಾತರಿಗೆ ಸಿಗುವ ಎಲ್ಲಾ ಸೌಲಭ್ಯ ಸದ್ಬಳಕೆಯಾಗಬೇಕು’ ಎಂದರು.
ಮುಕ್ತ ಮಹಿಳಾ ವೇದಿಕೆ ಶಾಂತಮ್ಮ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ಮಾತನಾಡಿದರು.
ಜೀವಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆ ತಾಲ್ಲೂಕು ಘಟಕ ಅಧ್ಯಕ್ಷ ರಾಮಚಂದ್ರಪ್ಪ ಕಾರ್ಯಕ್ರಮ ಆಯೋಜಿಸಿದ್ದರು.
ಅಲ್ಪ ಸಂಖ್ಯಾತ ಇಲಾಖೆ ಜಿಲ್ಲಾ ಅಧಿಕಾರಿ ಪಿ.ಸೀನಾ, ವ್ಯವಸ್ಥಾಪಕ ಇಬ್ರಾಹಿಂ ಉಲ್ಲಾ, ತಹಶೀಲ್ದಾರ್ ಎಲ್.ಸತ್ಯಪ್ರಕಾಶ್, ಪುರಸಭೆ ಸದಸ್ಯೆ ಪರ್ವೀನ್ ತಾಜ್ ಮುಕ್ತಿಯಾರ್, ಟಿಎಸ್ಎಸ್ ರಾಜ್ಯ ಘಟಕ ಸಂಚಾಲಕ ಆಜಂ ಷರೀಫ್, ಅಲ್ಪ ಸಂಖ್ಯಾತರ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಅನ್ಸರ್ ಪಾಷಾ, ಉಪಾಧ್ಯಕ್ಷ ಜಾವಿದ್ ಪಾಷಾ, ರಹಮತ್ಉಲ್ಲಾ, ಅಯುಬ್ಖಾನ್, ಸಯದ್ ನಯಾಜ್, ಮಹಿಳಾ ಘಟಕದ ಅಧ್ಯಕ್ಷೆ ಶಬಾನ, ಸಾಧಿಕಾಬಾನು, ಕೌಸರ್, ಮಹ್ಮದ್ ಆಸಿಫ್, ಖಯೀಂ ಭಾಗವಹಿಸಿದ್ದರು.
**
ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ದಲಿತರ ಅಭಿವೃದ್ಧಿಗಾಗಿ ಸರ್ಕಾರ ಒಟ್ಟು ₹ 16 ಸಾವಿರ ಕೋಟಿ ಮೀಸಲಿರಿಸಿದೆ. ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು.
–ಕೆ.ಚಂದ್ರಾರೆಡ್ಡಿ,
ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.