ADVERTISEMENT

ಜಮೀರ್ ಅಹಮದ್‌ಗೆ ಟೀಕೆಟ್ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2017, 6:50 IST
Last Updated 19 ಡಿಸೆಂಬರ್ 2017, 6:50 IST

ಕೋಲಾರ: 2018ರ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ನಿವೃತ್ತ ಐಎಎಸ್ ಅಧಿಕಾರಿ ಜಮೀರ್ ಅಹಮದ್ ಅವರಿಗೆ ಟಿಕೆಟ್ ನೀಡಬೇಕು ಎಂದು ವಂತೆ ಮುಸ್ಲಿಂ ಸಮುದಾಯದ ಮುಖಂಡರು ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಭಾನುವಾರ ನಿವಾಸದಲ್ಲಿ ಭೇಟಿಯಾಗಿ ಒತ್ತಾಯಿಸಿದರು.

ಸಂಸದ ಕೆ.ಎಚ್. ಮುನಿಯಪ್ಪ ಅವರು ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿ, ‘ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ನೀವೆಲ್ಲರೂ ಒಮ್ಮತದ ತೀರ್ಮಾನ ತೆಗೆದುಕೊಳ್ಳಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ಕುಮಾರ್ ಹಾಗೂ ಇತರೆ ನಾಯಕರ ಜತೆ ಕುಳಿತು ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.

ಜಮೀರ್ ಪಾಷ ಅವರು ಕೋಲಾರದಲ್ಲಿ ಮೂರು ವರ್ಷಗಳ ಕಾಲ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಸುಮಾರು ತಿಂಗಳುಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ. ಜನರಿಂದ ಸ್ಪಂದನೆ ವ್ಯಕ್ತವಾಗಿದೆ. ಶಾಸಕ ವರ್ತೂರು ಪ್ರಕಾಶ್ ಪ್ರತ್ಯೇಕ ಪಕ್ಷ ಮಾಡಲು ಹೊರಟಿರುವುದರಿಂದ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಈ ಬಾರಿ ಟಿಕೆಟ್ ನೀಡುವಂತೆ ಬೆಂಬಲಿಗರಾದ ಅಥಾವುಲ್ಲಾ, ಪ್ಯಾರೇಜಾನ್ ಆಗ್ರಹಿಸಿದರು.

ADVERTISEMENT

‘ಜಮೀರ್ ಪಾಷ ಅಭ್ಯರ್ಥಿಯಾಗಬೇಕೆಂದು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ. ಆದರೆ ಅಭ್ಯರ್ಥಿಯ ಆಯ್ಕೆ ಬಗ್ಗೆ ಒಬ್ಬರೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದ್ದಾರೆ’ ಎಂದು ಸಂಸದ ಮುನಿಯಪ್ಪ ತಿಳಿಸಿದರು.

ಇಷ್ಟು ದಿನ ಶಾಸಕ ವರ್ತೂರು ಪ್ರಕಾಶ್ ಅವರನ್ನು ಯಾವ ಕಾರಣಕ್ಕೆ ಬೆಂಬಲಿಸಿದ್ದು ಎಂಬುದು ಕಾರ್ಯಕರ್ತರಿಗೆ ತಿಳಿಯಬೇಕು. ಕಳೆದ ನಾಲ್ಕೂವರೆ ವರ್ಷದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ನಡೆದ ಚುನಾವಣೆಯಲ್ಲಿ ಸಹಕಾರ ನೀಡಿದ್ದರು. ಇದರಿಂದಾಗಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ಸ್ಪಷ್ಟಪಡಿಸಿದರು.

ಸಚಿವ ರಮೇಶ್ ಕುಮಾರ್ ಮತ್ತು ವರ್ತೂರು ಪ್ರಕಾಶ್ ನಡುವೆ ಭಿನ್ನಾಭಿಪ್ರಾಯ ಬಂತು. ಇದಲ್ಲದೆ ಪಕ್ಷದ ಮುಖ್ಯ ಸಚೇತಕ ಮುದ್ದೆಬಿಹಾಳದ ನಾಡಗೌಡ ಅವರನ್ನು ಸೋಲಿಸಬೇಕೆಂದು ವರ್ತೂರು ಪ್ರಕಾಶ್ ಆ ಕ್ಷೇತ್ರಕ್ಕೆ ಹೋಗಿ ಹೇಳಿದ್ದರಿಂದ ಮುಖ್ಯಮಂತ್ರಿಗಳಿಗೂ ಅಸಮಾಧಾನ ಉಂಟಾಗಿ ಪಕ್ಷ ಸೇರ್ಪಡೆಯ ಅವಕಾಶ ತಪ್ಪಿತು. ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ಕಾಂಗ್ರೆಸ್‌್ ಪಕ್ಷದಿಂದ ನಮ್ಮಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್, ಆಹಾರ ನಿಗಮದ ಉಪಾಧ್ಯಕ್ಷ ಶ್ರೀನಿವಾಸ್, ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಹಾಜರಿದ್ದರು.

* * 

ಅಭ್ಯರ್ಥಿ ಆಯ್ಕೆ ವಿಚಾರವನನ್ನು ಒಬ್ಬರೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಯಾರಿಗೆ ಟಿಕೇಟ್ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತಾರೆ.
– ಕೆ.ಚ್.ಮುನಿಯಪ್ಪ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.