ADVERTISEMENT

ಮಗುವಿನ ನಗು, ಅಳು ಜನಪದ ಕಲೆಯ ರೂಪ

ಡಾ.ಎಚ್.ಎಲ್.ನಾಗೇಗೌಡ ಜಯಂತಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 13:25 IST
Last Updated 12 ಫೆಬ್ರುವರಿ 2017, 13:25 IST
ಕೋಲಾರ ತಾಲ್ಲೂಕಿನ ಹೊಸಮಟ್ಣಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಜನಪದ ತಜ್ಞ ಡಾ.ಎಚ್.ಎಲ್.ನಾಗೇಗೌಡ ಅವರ ಜನ್ಮ ಜಯಂತಿಯನ್ನು ಸಾಹಿತಿ ಸ.ರಘುನಾಥ್‌ ಉದ್ಘಾಟಿಸಿದರು
ಕೋಲಾರ ತಾಲ್ಲೂಕಿನ ಹೊಸಮಟ್ಣಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಜನಪದ ತಜ್ಞ ಡಾ.ಎಚ್.ಎಲ್.ನಾಗೇಗೌಡ ಅವರ ಜನ್ಮ ಜಯಂತಿಯನ್ನು ಸಾಹಿತಿ ಸ.ರಘುನಾಥ್‌ ಉದ್ಘಾಟಿಸಿದರು   

ಕೋಲಾರ: ‘ಮಗುವಿನ ನಗು, ಅಳು ಜನ ಪದ ಕಲೆಯ ರೂಪವಿದ್ದಂತೆ’ ಎಂದು ಸಾಹಿತಿ ಸ.ರಘುನಾಥ್ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಹೊಸಮಟ್ಣಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಮತ್ತು ಕನ್ನಡ ಜನಪದ ಪರಿಷತ್ತಿನಿಂದ ಶನಿವಾರ ನಡೆದ ಜನಪದ ತಜ್ಞ ಡಾ.ಎಚ್.ಎಲ್.ನಾಗೇಗೌಡ ಅವರ ಜನ್ಮಜಯಂತಿ, ದಾಸರ ಭಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜನಪದ ಕಲೆಗಳು ಇಡೀ ಕನ್ನಡ ಬದುಕಿನ ಜೀವನಾಡಿಯಾಗಿದೆ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ಜನಪದ ಜತೆಯಾಗಿರುತ್ತದೆ’ ಎಂದರು.
‘ನಾಗೇಗೌಡರು ರಚಿಸಿರುವ ‘ದೊಡ್ಡಮನೆ’, ‘ರಾವ್‌ಬಹುದ್ದೂರು’  ಕಾದಂಬರಿಗಳು ನಿರ್ಲಕ್ಷ್ಯಕ್ಕೆ ಒಳಪಟ್ಟಿವೆ’ ಎಂದು ವಿಷಾದಿಸಿದರು.

ಕನ್ನಡ ಜನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಮುನಿವೆಂಕಟೇಗೌಡ ಮಾತನಾಡಿ, ‘ಜನಪದ ಕಲೆಯನ್ನು ರಕ್ಷಿಸಿ ಹೇಗೆ ಬೆಳೆಸಬೇಕು ಎಂಬುದನ್ನು ನಾಗೇಗೌಡರು ತಿಳಿಸಿಕೊಟ್ಟಿದ್ದಾರೆ. ಜನಪದ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ’ ಎಂದರು.

ಅವಸಾನ ಅಂಚಿನಲ್ಲಿದ್ದ ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ತನ್ನ ಜೀವನವನ್ನು ಮುಡುಪಾಗಿಟ್ಟು ಜನಪದ ಲೋಕವನ್ನು ಕಟ್ಟಿರುವ ಎಚ್.ಎಲ್.ನಾಗೇಗೌಡರ ಹೆಸರಿನಲ್ಲಿ ಸರ್ಕಾರ ಕಲಾವಿದರನ್ನು ಪ್ರೊತ್ಸಹಿಸುವ ಹಾಗೂ ಅವರ ಜಯಂತಿಯನ್ನು ಆಚರಣೆ ಮಾಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ರಂಗವಿಜಯಾ ಟ್ರಸ್ಟ್‌ ಕಾರ್ಯಾಧ್ಯಕ್ಷ ಎ.ಅಶ್ವತ್ಥರೆಡ್ಡಿ ಮಾತನಾಡಿ, ‘ಜನಪದ ಕಲೆ, ತನ್ನದೇ ಪರಂಪರೆ ಹೊಂದಿದೆ. ಸಂಸ್ಕೃತಿಯನ್ನು ಹೊಂದಿರದ ದೇಶ ಅಥವಾ ಮನುಷ್ಯ ಮೂರು ತಲೆಮಾರುಗಳಷ್ಟು ಮಾತ್ರ ತನ್ನ ಅಸ್ತಿತ್ವ ಹೊಂದಿರಲು ಸಾಧ್ಯ. ಆದುದರಿಂದ ಒಂದು ದೇಶದ ಅಥವಾ ಮನುಷ್ಯನ ಅಸ್ತಿತ್ವ ಆತನ ಸಂಸ್ಕೃತಿಯ ಮೇಲೆ ಅವಲಂಬಿತವಾಗಿರುತ್ತದೆ’ ಎಂದು   ಹೇಳಿದರು.

ಜನಪದ ಕಲೆ, ತನ್ನದೇ ಆದ ಪರಂಪರೆ ಹೊಂದಿದೆ. ಸಂಸ್ಕೃತಿಯನ್ನು ಹೊಂದಿರದ ದೇಶ ಅಥವಾ ಮನುಷ್ಯ ಮೂರು ತಲೆಮಾರುಗಳಷ್ಟು ಮಾತ್ರ ತನ್ನ ಅಸ್ತಿತ್ವ ಹೊಂದಿರಲು ಸಾಧ್ಯ. ಆದುದ ರಿಂದ ಒಂದು ದೇಶದ ಅಥವಾ ಮನು ಷ್ಯನ ಅಸ್ತಿತ್ವ ಆತನ ಸಂಸ್ಕೃತಿಯ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ಜನ ಪದ ಪರಂಪರೆಗೆ  ಇತಿಹಾಸ ಇರುವುದರಿಂದಲೇ, ನಮ್ಮ ದೇಶದ ಅಸ್ತಿತ್ವ ಬಹಳ ಉತ್ತಮ ಎಂದರು. 

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ.ನಾರಾಯಣಪ್ಪ, ನಿವೃತ್ತ ಸರ್ವೆ ಅಧಿಕಾರಿ ನಾರಾಯಣಗೌಡ, ಶಿಕ್ಷಕ ಗೋಪಾಲರೆಡ್ಡಿ, ಕಲಾವಿದ ನಾರಾಯಣಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಬಾಬು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT