ADVERTISEMENT

ಶಂಕರನಾರಾಯಣಸ್ವಾಮಿ, ವೆಂಕಟ ಗಿರಿಯಪ್ಪ ಜಾತ್ರೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 7:05 IST
Last Updated 13 ಮಾರ್ಚ್ 2017, 7:05 IST

ಮಾಲೂರು: ಪಟ್ಟಣದ ಪುರಾತನ ಶಂಕರನಾರಾಯಣಸ್ವಾಮಿ ದೇಗುಲದಲ್ಲಿ ಹೋಳಿ ಹುಣ್ಣಮೆ ಅಂಗವಾಗಿ ಸ್ವಾಮಿಯ ರಥೋತ್ಸವವು ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಮುಜರಾಯಿ ಇಲಾಖೆಗೆ ಸೇರಿದ ಪಟ್ಟಣದ ಹೃದಯ ಭಾಗದಲ್ಲಿರುವ ಶಂಕರ ನಾರಾಯಣಸ್ವಾಮಿ ದೇಗುಲದಲ್ಲಿ ಕಳೆದ ಒಂಬತ್ತು ದಿನಗಳಿಂದ ರಥೋತ್ಸವದ ಕೈಂಕರ್ಯಗಳು ಪ್ರಧಾನ ಅರ್ಚಕ  ಶ್ರೀನಿವಾಸ್ ದೀಕ್ಷಿತ್  ನೇತೃತ್ವದಲ್ಲಿ ನೆರವೇರಿದವು.

ಮಾರ್ಚ್ 8ರಂದು ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿ ಶೇಷವಾಹನೋತ್ಸವ, ವೃಷಭ ವಾಹನೋತ್ಸವ, ಗಿರಿಜ  ಕಲ್ಯಾಣೋತ್ಸವ, ಪಾರ್ವತೋತ್ಸವ, ದ್ವಾದಶರಾಧನೆ, ಆಸ್ತಾನ ಪೂಜಾ, ವಸಂತೋತ್ಸವ, ಶಯನೋತ್ಸವ ನಡೆಯಿತು.

ಭಾನುವಾರ ಶಂಕರ ನಾರಾಯಣನ ಬ್ರಹ್ಮೋತ್ಸವದ ಕೈಂಕರ್ಯಗಳು ಬೆಳಿಗ್ಗೆಯಿಂದಲೇ ಪ್ರಾರಂಭವಾದವು. ಅಪಾರ ಭಕ್ತರೊಂದಿಗೆ ಮಧ್ಯಾಹ್ನ 12 ಘಂಟೆಗೆ ಕಂದಾಯ ಇಲಾಖೆಯ ಅಧಿಕಾರಿಗಳ ಭಾಗಿತ್ವದಲ್ಲಿ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಯಿತು.

ಹರ ಹರ ಮಹಾದೇವ ಎಂದು ಭಕ್ತರು ಜಯ ಘೋಷಗಳನ್ನು ಪಠಿಸುತ್ತಿದ್ದಂತೆ ಶಂಕರನಾರಾಯಣಸ್ವಾಮಿಯ ರಥ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಪಟ್ಟಣದ 4ನೇ ವಾರ್ಡ್‌ನ ಕುಪ್ಪಶೆಟ್ಟಿ ಬಾವಿ ಬಳಿ 2 ಗಂಟೆಗೆ ರಥವನ್ನು ನಿಲ್ಲಿಸಲಾಯಿತು. ನಂತರ ಸಂಜೆ ದೇವಾಲಯದ ಆವರಣದಲ್ಲಿ ರಥವನ್ನು ನಿಲ್ಲಿಸಲಾಯಿತು.

ಬಂದಿದ್ದ ಭಕ್ತರಿಗೆ ಪಾನಕ, ಕೋಸಂಬರಿ ಮತ್ತು ಮಜ್ಜಿಗೆ ವಿತರಿಸಲಾಯಿತು. ಕಂದಾಯ ಇಲಾಖೆಯ  ನಾಗರಾಜ್, ಮುಖಂಡರಾದ ಎಸ್.ವಿ.ಲೋಕೇಶ್, ಗೂಡು ದೇವರಾಜ್, ರಾಮಚಂದ್ರ, ಹರಿನಾಥ್ ಗುಪ್ತ, ಬಿ.ವಿ.ಲಕ್ಷ್ಮಿನಾರಾಯಣಶೆಟ್ಟಿ ಉಪಸ್ಥಿತರಿದ್ದರು.

ಅಪಾರ ಜನಸ್ತೋಮದ ನಡುವೆ ಅದ್ಧೂರಿ ರಥೋತ್ಸವ
ಮಾಲೂರು:
ವೆಂಕಟ ಗಿರಿಯಪ್ಪ ಜಾತ್ರೆ ಅಂಗವಾಗಿ ಭಾನುವಾರ ಪ್ರಸನ್ನ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ, ರಾಸುಗಳ ಜಾತ್ರೆ ತಾಲ್ಲೂಕಿನ ದಾದಿನಾಯಕನ ದೊಡ್ಡಿ ಗ್ರಾಮದಲ್ಲಿ ಅಪಾರ ಜನಸ್ತೋಮದೊಂದಿಗೆ ಅದ್ಧೂರಿಯಾಗಿ ನೆರವೇರಿತು.

ತಾಲ್ಲೂಕಿನ ಲಕ್ಕೂರು ಹೋಬಳಿಯ ಗಡಿ ಗ್ರಾಮವಾದ ಡಿ.ಎನ್.ದೊಡ್ಡಿ ಗ್ರಾಮದಲ್ಲಿ 5 ದಿನಗಳಿಂದ ಜಾತ್ರೆ ನಡೆಯುತ್ತಿದ್ದು, ಭಾನುವಾರ ನಡೆದ ಬ್ರಹ್ಮರಥೋತ್ಸವದಲ್ಲಿ ಪ್ರಸನ್ನ ವೆಂಕಟರಮಣ ಸ್ವಾಮಿ ರಥವು 9 ಅಂಕಣದ 45 ಅಡಿ ಎತ್ತರವನ್ನು ಒಳಗೊಂಡಿದ್ದು, ಬಣ್ಣದ ಬಟ್ಟೆಗಳಿಂದ ಹಾಗೂ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಸುತ್ತ–ಮುತ್ತಲ ಗ್ರಾಮಗಳಿಂದ ಬಂದಿದ್ದ ಅಪಾರ ಸಂಖ್ಯೆ ಭಕ್ತರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ಸಂಭ್ರಮ–ಸಡಗರದೊಂದಿಗೆ ರಥವನ್ನು ಎಳೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.