ADVERTISEMENT

ಶಾಸಕರ ವಿರುದ್ಧ ರೈತ ಸೇನೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 9:28 IST
Last Updated 15 ಸೆಪ್ಟೆಂಬರ್ 2017, 9:28 IST
ಬಂಗಾರಪೇಟೆಯ ಪ್ರಮುಖ ರಸ್ತೆಗಳ ಫುಟ್ಪಾತ್ ಮೇಲಿನ ವ್ಯಾಪಾರಿಗಳನ್ನು ತೆರವುಗೊಳಿಸಲು ಮುಂದಾಗಿರುವ ಪುರಸಭೆ ಕಾರ್ಯವೈಖರಿಯನ್ನು ಖಂಡಿಸಿ ಕರ್ನಾಟಕ ರೈತ ಸೇನೆ ಕಾರ್ಯಕರ್ತರು ಬಜಾರ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಬಂಗಾರಪೇಟೆಯ ಪ್ರಮುಖ ರಸ್ತೆಗಳ ಫುಟ್ಪಾತ್ ಮೇಲಿನ ವ್ಯಾಪಾರಿಗಳನ್ನು ತೆರವುಗೊಳಿಸಲು ಮುಂದಾಗಿರುವ ಪುರಸಭೆ ಕಾರ್ಯವೈಖರಿಯನ್ನು ಖಂಡಿಸಿ ಕರ್ನಾಟಕ ರೈತ ಸೇನೆ ಕಾರ್ಯಕರ್ತರು ಬಜಾರ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.   

ಬಂಗಾರಪೇಟೆ: ಸರ್ಕಾರಿ ಆಸ್ಪತ್ರೆ ಮುಂಭಾಗದ ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಪುರಸಭೆ ಅಧಿಕಾರಿಗಳು ಮತ್ತು ಶಾಸಕರು ಅವರನ್ನು ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರೈತ ಸೇನೆ ಕಾರ್ಯಕರ್ತರು ಬಜಾರ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರಿ ಆಸ್ಪತ್ರೆ ಮುಂಭಾಗ, ಬಸವೇಶ್ವರ ದೇಗುಲ ಬಳಿ, ಅಕ್ಕಚ್ಚಮ್ಮ ಕಲ್ಯಾಣ ಮಂಟಪದಿಂದ ಕುವೆಂಪು ಸರ್ಕಲ್, ಬಜಾರ್ ರಸ್ತೆ, ಗೀತಾಮಂದಿರದಿಂದ ತಾಲ್ಲೂಕು ಕಚೇರಿವರೆಗಿನ ರಸ್ತೆಯ ಫುಟ್‌ಪಾತ್‌ ಮೇಲಿನ ಅಂಗಡಿಗಳನ್ನು ತೆರವುಗೊಳಿಸಲು ಪುರಸಭೆ ಏಕಾಏಕಿ ನಿರ್ದಾರ ತೆಗೆದುಕೊಂಡಿದೆ. ಇದರಿಂದ ಇಲ್ಲಿನ ವ್ಯಾಪಾರಸ್ಥರು ಬೀದಿಪಾಲಾಗಲಿದ್ದಾರೆ ಎಂದರು.

ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ತಕ್ಷಣ ಅಂಗಡಿಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ನಿತ್ಯ ವ್ಯಾಪಾರ ಮಾಡಿದರೆ ಮಾತ್ರ ಫುಟ್ಪಾತ್ ಮೇಲಿನ ವ್ಯಾಪಾರಿಗಳಿಗೆ ಆ ದಿನದ ಜೀವನ ನಡೆಯುತ್ತದೆ. ತರಕಾರಿ, ಹೂ, ಹಣ್ಣು, ಸೇರಿದಂತೆ ದಿನ ಬಳಕೆ ವಸ್ತುಗಳನ್ನು ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿರುವವರಿಗೆ ಪುರಸಭೆ ನಿರ್ಧಾರ ನೋವು ಉಂಟುಮಾಡಿದೆ. ಖಾಲಿ ಮಾಡದಿದ್ದರೆ ಜೆಸಿಬಿ ಮೂಲಕ ತೆರವುಗೊಳಿಸುವ ಬೆದರಿಕೆ ಒಡ್ಡಿರುವುದು ಆಘಾತ ಮೂಡಿಸಿದೆ ಎಂದು ವಿಷಾದಿಸಿದರು.

ADVERTISEMENT

ಶಾಸಕರು ಎಸ್.ಎನ್.ನಾರಾಯಣ ಸ್ವಾಮಿ ಅವರು ವ್ಯಾಪಾರಿಗಳ ಕಷ್ಟಕ್ಕೆ ಸ್ಪಂದಿಸದಿದ್ದರೆ ಬಂಗಾರಪೇಟೆ ಬಂದ್ ಮಾಡುವುದಾಗಿ ತಿಳಿಸಿ, ಅವರ ಮತ್ತು ಪುರಸಭೆ ವಿರುದ್ಧ ದಿಕ್ಕಾರ ಕೂಗಿದರು ಕರ್ನಾಟಕ ರೈತ ಸೇನೆ ತಾಲ್ಲೂಕು ಘಟಕ ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಅಂಬಿಕಾ ಪ್ರಭುದೇವ್, ತಾಲ್ಲೂಕು ಘಟಕ ಅಧ್ಯಕ್ಷೆ ಪುಷ್ಪಮ್ಮ, ತಿಮ್ಮಾಪುರ ನಾಗರಾಜ್, ಹೊಸೂರು ವೆಂಕಟೇಶಪ್ಪ, ಹರಟಿ ಆನಂದಗೌಡ, ತಮ್ಮೇನಹಳ್ಳಿ ಮುನಿಯಪ್ಪ ಪಾಲ್ಗೊಂಡಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.