ಶ್ರೀನಿವಾಸಪುರ: ಹೈನುಗಾರಿಕೆ ಬರಪೀಡಿತ ಪ್ರದೇಶದ ರೈತರಿಗೆ ವರದಾನವಾಗಿದೆ. ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲನ್ನು ಉತ್ಪಾದಿಸುವುದರ ಮೂಲಕ ಗರಿಷ್ಠ ಬೆಲೆಯನ್ನು ಪಡೆದುಕೊಳ್ಳಬೇಕು ಎಂದು ಕೆ.ಪಾತೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪಿ.ವಿ.ಬಾಬುರೆಡ್ಡಿ ಹೇಳಿದರು.
ತಾಲ್ಲೂಕಿನ ಕೆ.ಪಾತೂರು ಗ್ರಾಮದಲ್ಲಿ ಬುಧವಾರ ಹೆರಿಟೇಜ್ ಹಾಲಿನ ಡೇರಿ ವತಿಯಿಂದ ನೀಡಲಾಗಿದ್ದ ಸ್ಟೀಲ್ ಕ್ಯಾನ್ಗಳನ್ನು ಹಾಲು ಉತ್ಪಾದಕರಿಗೆ ವಿತರಿಸಿ ಮಾತನಾಡಿದರು.
ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಅಪಘಾತ ವಿಮೆ ಮಾಡಿಸಲಾಗುವುದು. ಹಸುಗಳಿಗೂ ವಿಮೆ ಮಾಡಿಸಲಾಗುವುದು. ಇದರಿಂದ ರೈತರಿಗೆ ಹೆಚ್ಚಿನ ಉಪಯೋಗವಿದೆ ಎಂದು ಹೇಳಿದರು.
ಕ್ಷೀರೋದ್ಯಮದಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಬೇಕು. ಹಸುಗಳ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು. ಆರೋಗ್ಯವಂತ ಹಸುವಿನಿಂದ ಮಾತ್ರ ಉತ್ತಮ ಗುಣಮಟ್ಟದ ಹಾಲು ಸಿಗಲು ಸಾಧ್ಯವಾಗುತ್ತದೆ. ರೋಗ ರುಜಿನ ಬರದಂತೆ ಕಾಲ ಕಾಲಕ್ಕೆ ಸರಿಯಾಗಿ ತಜ್ಞ ಪಶುವೈದ್ಯರಿಂದ ಲಸಿಕೆ ಕೊಡಿಸಬೇಕು. ಕೊಟ್ಟಿಗೆಯನ್ನು ಸ್ವಚ್ಛವಾಗಿಡಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರಾಧಿಕಾರಿಗಳಾದ ಸೋಮನಾಥ್, ಶಂಕರ್, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಪಿ.ಎಂ.ಬಾಬುರೆಡ್ಡಿ, ಯರ್ರಂವಾರಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಾರೆಡ್ಡಿ, ಮುಖಂಡರಾದ ಪಿ.ಆರ್.ಮಂಜುನಾಥ್, ಶಕರರೆಡ್ಡಿ. ಬಯ್ಯಾರೆಡ್ಡಿ, ರಾಮಕೃಷ್ಣ, ವೆಂಕಟರಮಣಾರೆಡ್ಡಿ, ತುಮ್ಮಲಪಲ್ಲಿ ಗೋಪಾಲರೆಡ್ಡಿ, ಪುಲಸಗುಂತಲ ವೆಂಕಟರೆಡ್ಡಿ ಸಭೆಯಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.