ಕೊಪ್ಪಳ: 'ಅಸಮಾನತೆ, ಶೋಷಣೆ ಇರುವವರೆಗೂ ಬಸವಣ್ಣನ ವಿಚಾರಧಾರೆಗಳು ಜೀವಂತವಾಗಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಬಸವಣ್ಣನ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿ ಸೋಮವಾರ ಅವರು ಮಾತನಾಡಿದರು.
'ಎಲ್ಲರೂ ಮನುಷ್ಯರಾಗಿ ಬದುಕಿದಾಗ ಮಾತ್ರ ಮನುಕುಲದ ಉದ್ಧಾರ ಸಾಧ್ಯ. ಮೊದಲು ನಾವು ಮಾನವರು. ಆ ಮೇಲೆ ನಾವು ನಂಬಿಕೊಂಡ ಜಾತಿ, ಧರ್ಮ ಇತ್ಯಾದಿ ಪರಿಗಣನೆಗೆ ಬರುತ್ತದೆ. 850 ವರ್ಷಗಳ ಹಿಂದೆ ಬಸವಾದಿ ಶರಣರು ಸಮಾಜದ ಶ್ರೇಣೀಕೃತ ವ್ಯವಸ್ಥೆ ತೊಡೆದುಹಾಕಲು ಪ್ರಯತ್ನಿಸಿದರು. ಕಾಯಕ ಮತ್ತು ದಾಸೋಹದ ಸಂದೇಶ ಕೊಟ್ಟರು. ಸಾಮಾಜಿಕ ಅವ್ಯವಸ್ಥೆ, ಶೋಷಣೆಯ ವಿರುದ್ಧ ದೊಡ್ಡ ಕ್ರಾಂತಿಯನ್ನೇ ಮಾಡಿದರು. ಇಂಥ ಸಂದೇಶ ಸಾರಿದ ಮಹಾತ್ಮನ ಜೀವನ ಎಲ್ಲರಿಗೂ ಪ್ರೇರಣೆ ನೀಡಲಿ. ಈ ಉದ್ದೇಶಕ್ಕೆ ಅವರ ಪ್ರತಿಮೆ ಇಲ್ಲಿ ಸ್ಥಾಪಿಸಿರುವುದು ಸ್ವಾಗತಾರ್ಹ' ಎಂದರು.
ಬಹದ್ದೂರ್ಬಂಡಿ ಏತ ನೀರಾವರಿ ಯೋಜನೆಯ ಮೊದಲ ಹಂತಕ್ಕೆ ಚಾಲನೆ ನೀಡಿದ ಅವರು, 'ಈ ಯೋಜನೆಯ ಮೊದಲ ಹಂತಕ್ಕೆ ₹80 ಕೋಟಿ ಅನುದಾನ ನೀಡಲಾಗಿದೆ. ಶಾಸಕ ಕೆ.ರಾಘವೆಂದ್ರ ಹಿಟ್ನಾಳ್ ಕ್ರಿಯಾಶೀಲ ಶಾಸಕ. ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದಾರೆ. ಅವರಿಗೆ ಮುಂದೆಯೂ ಆಶೀರ್ವಾದ ಇರಲಿ' ಎಂದು ಕೋರಿದರು.
ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಬಳಗಾನೂರಿನ ಶಿವಶಾಂತವೀರ ಶರಣರು, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಶಿವರಾಜ ತಂಗಡಗಿ, ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ.ಗುಮಾಸ್ತೆ, ಲಿಂಗಾಯತ ಸಮಾಜದ ಮುಖಂಡ ಬಸವರಾಜ ಬಳ್ಳೊಳ್ಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಹಿಟ್ನಾಳ್, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.