ADVERTISEMENT

ಕುಷ್ಟಗಿ: ಬೇಡಿಕೆಗೆ ಒತ್ತಾಯಿಸಿ ರೈತರ ಧರಣಿ

​ಪ್ರಜಾವಾಣಿ ವಾರ್ತೆ
Published 19 ಮೇ 2017, 6:23 IST
Last Updated 19 ಮೇ 2017, 6:23 IST

ಕುಷ್ಟಗಿ:  ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು ಗುರುವಾರ ತಹಶೀಲ್ದಾರ್‌ ಕಚೇರಿ ಬಳಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಆರ್‌.ಕೆ.ದೇಸಾಯಿ, ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡದ ರಾಜ್ಯ ಸರ್ಕಾರ ಭೂ ಕಬಳಿಕೆಗೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವಿಶೇಷ ನ್ಯಾಯಾಲಯಗಳಲ್ಲಿ ರೈತರ ವಿರುದ್ಧ ದಾವೆ ಹೂಡಲು ಮುಂದಾಗಿದೆ.

ಇದರಿಂದ ಸಾಕಷ್ಟು ಸಂಖ್ಯೆ ರೈತರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಆದರೆ ಸರ್ಕಾರಕ್ಕೆ ಮೋಸ ಮಾಡಿ ರಿಯಲ್‌ ಎಸ್ಟೇಟ್‌ ಹೆಸರಿನಲ್ಲಿ ಭೂ ಕಬಳಿಸುತ್ತಿರುವ ದೊಡ್ಡ ಕುಳಗಳ ಮೇಲೆ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಉದ್ಯೋಗ ಖಾತರಿ ಯೋಜನೆಯ ಕೆಲಸ ಕಾಮಗಾರಿಗಳನ್ನು ಆರಂಭಿಸದ ಕಾರಣ ರೈತರು ಗುಳೆ ಹೋಗವಂಥ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಯೋಜನೆ ಇದ್ದೂ ಇಲ್ಲದಂತಾಗಿದೆ. ಕೆಲಸ ಮಾಡಿದವರಿಗೆ ಹಣ ಪಾವತಿಸುತ್ತಿಲ್ಲ. ಹೊಸದಾಗಿ ಕೆಲಸವನ್ನೂ ಕೊಡುತ್ತಿಲ್ಲ ಎಂದು ದೂರಿದರು. ಬೆಳೆಹಾನಿ ಪರಿಹಾರ ಬಹಳಷ್ಟು ರೈತರ ಬ್ಯಾಂಕ್‌ ಖಾತೆಗಳಿಗೆ ಇನ್ನೂ ಜಮೆಯಾಗಿಲ್ಲ ಎಂದು ದೂರಿದರು.

ADVERTISEMENT

ಬ್ಯಾಂಕ್‌ನಲ್ಲಿ ಹೊಸ ಖಾತೆ ತೆರೆಯುವುದಕ್ಕೆ ಮತ್ತು ವ್ಯವಹರಿಸುವುದಕ್ಕೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಪಾನ್‌ ಕಾರ್ಡ್‌ ಕಡ್ಡಾಯಗೊಳಿಸಿದೆ. ಆದರೆ ಅನಕ್ಷರಸ್ಥರು, ರೈತರು, ಕೃಷಿ ಕೂಲಿಕಾರರು ಪಾನ್‌ಕಾರ್ಡ್‌ ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.

ಈ ಬಗ್ಗೆ ಅಧಿಕಾರಿಗಳು ಸಂಬಂಧಿಸಿದ ಬ್ಯಾಂಕ್‌ ವ್ಯವಸ್ಥಾಪಕರಿಗೆ ತಾಕೀತು ಮಾಡಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಭಾರ ತಹಶೀಲ್ದಾರ್‌ ಶ್ರೀನಿವಾಸಮೂರ್ತಿ, ಪಾನ್‌ಕಾರ್ಡ್‌ ಕಡ್ಡಾಯ ಮಾಡಿಲ್ಲ. ಯಾರಾದರೂ ಕೇಳಿದರೆ ತಮ್ಮ ಗಮನಕ್ಕೆ ತರುವಂತೆ ಪ್ರತಿಭಟನಾ ನಿರತರಿಗೆ ಹೇಳಿದರು.

ರೈತ ಸಂಘದ ಪ್ರಮುಖರಾದ ಹುಚ್ಚಿರಪ್ಪ ಹಿರೇನಂದಿಹಾಳ, ಭೀಮಣ್ಣ ನಿಂಗೋಜಿ, ಕಳಕಪ್ಪ ಹೂಗಾರ, ಶರಣಪ್ಪ ಬಾರಕೇರ, ಹೇಮಾ, ಮಲ್ಲಿಕಾರ್ಜುನ, ಹನುಮಗೌಡ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.  ಅಧಿಕಾರಿಗಳ ಭರವಸೆ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.