ಹನುಮಸಾಗರ: ‘ಜನಸಾಮಾನ್ಯರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿ ಅಭಿವೃದ್ದಿ, ಅರಿವು ಹೊಂದಿದಾಗ ಮಾತ್ರ ಸಹಜವಾಗಿ ಜನಸಂಖ್ಯೆ ಇಳಿಮುಖವಾಗುತ್ತದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಆನಂದ ಗೊಟೂರು ಹೇಳಿದರು.
ಸೋಮವಾರ ಸಮೀಪದ ಹನುಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಜನರಲ್ಲಿ ಅನಕ್ಷರತೆ, ಮೂಢನಂಬಿಕೆ, ಗಂಡು ಮಗುವಿಗಾಗಿ ಹಂಬಲ ಕಾರಣಗಳಿಂದ ಜನಸಂಖ್ಯೆ ಹೆಚ್ಚುತ್ತಿದೆ. ಆಶಾ ಕಾರ್ಯಕರ್ತೆಯರು ಸಾರ್ವಜನಿಕರಲ್ಲಿ ಜಾಗೃತಿ ಭಾವನೆ ಮೂಡಿಸಲು ಸಂಕಲ್ಪ ಮಾಡಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ನೇಮಣ್ಣ ಮೇಲಸಕ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ತಾಲ್ಲೂಕಿನ ಅಂಚಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕುಡಿಯುವ ನೀರು ಸೇರಿದಂತೆ ಆರೋಗ್ಯ ಕೇಂದ್ರಗಳಿಗೆ ಆವರಣ ಗೋಡೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ. ಅಲ್ಲದೆ, ನಿಲೋಗಲ್ ಆರೋಗ್ಯ ಉಪಕೇಂದ್ರಕ್ಕೆ ವಸತಿ ಗೃಹಗಳ ನಿರ್ಮಾಣ ಹಾಗೂ ಸಿಬ್ಬಂದಿ ನೇಮಕಾತಿಗೆ ಕೂಡಲೆ ಸ್ಪಂದಿಸಲಾಗುವುದು’ ಎಂದು ತಿಳಿಸಿದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀದೇವಿ ವಸ್ತ್ರದ ಮಾತನಾಡಿ, ‘ಸಮಾಜದಲ್ಲಿ ನಡೆಯುವ ಬಾಲ್ಯ ವಿವಾಹಗಳನ್ನು ಸಾರ್ವಜನಿಕರೇ ತಡೆಗಟ್ಟುವಂತಾಗಬೇಕು. ಹೆರಿಗೆ ಅಂತರ ಕಾಯ್ದುಕೊಂಡು ಮಕ್ಕಳ ಬೆಳವಣಿಗೆ ಕುಂಠಿತವಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಅಂದಪ್ಪ ತಳವಾರ, ಹನುಮನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಶ್ರೀ ಒಂದಕುದರಿ, ನಿಲೋಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಗಾಜಿ, ಬಿಳೇಕಲ್ ಗ್ರಾ.ಪಂ ಅಧ್ಯಕ್ಷೆ ಹೊನ್ನಮ್ಮ ತಳವಾರ, ಉಪಾಧ್ಯಕ್ಷ ಸಿದ್ದು ರೊಟ್ಟಿ, ಲಕ್ಷ್ಮವ್ವ ರಗಣಿ, ಆಪ್ತ ಸಮಾಲೋಚಕ ಕೆ.ಎಸ್.ಮಾಗಿ, ಮುಖ್ಯಶಿಕ್ಷಕ ರಾಮಣ್ಣ ಕಾಡದ, ಭೀಮಣ್ಣ ತಳವಾರ, ವೈದ್ಯಾಧಿಕಾರಿಗಳಾದ ಡಾ.ಪ್ರಿಯಾಂಕ, ಡಾ.ವಿಜಯಲಕ್ಷ್ಮಿ, ಡಾ.ನೀಲಮ್ಮ, ಡಾ.ಜಿ.ಸಿ.ಪಾಟೀಲ, ಡಾ.ಆರ್.ಎನ್. ಪವಾರ, ಡಾ.ವಿನಾಯಕ, ಗ್ರಾಮ ಪಂಚಾಯಿತಿ ಸದಸ್ಯ ಪರಶುರಾಮ ಬಾಗಲಿ, ಪ್ರಕಾಶಗೌಡ ಬೆದವಟ್ಟಿ ಇದ್ದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಹನುಮನಾಳ, ಹಿರೇಗೊಣ್ಣಾಗರ ಹಾಗೂ ಮಾಲಗಿತ್ತಿ ಪ್ರಾಥಮಿಕ ಆರೋಗ ಕೇಂದ್ರಗಳ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಜಾಥಾ ನಡೆಸಿದರು. ಕಿರಿಯ ಆರೋಗ್ಯ ಸಹಾಯಕ ಡಿ.ಎಸ್.ರಾಠೋಡ ಕಾರ್ಯಕ್ರಮ ನಿರೂಪಿಸಿದರು. ವಿರೇಶ ಹಿರೇಮಠ ಸ್ವಾಗತಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.