ADVERTISEMENT

ನಿರಂತರ ಪ್ರಯತ್ನ, ಪ್ರಾಮಾಣಿಕತೆಯಿಂದ ಫಲ

​ಪ್ರಜಾವಾಣಿ ವಾರ್ತೆ
Published 28 ಮೇ 2017, 6:16 IST
Last Updated 28 ಮೇ 2017, 6:16 IST

ಮಂಡ್ಯ: ‘ನಿರಂತರ ಪ್ರಯತ್ನ, ಛಲ, ನಿಷ್ಠೆ, ಪ್ರಾಮಾಣಿಕತೆ ಪ್ರತಿಫಲ ಇದ್ದೇ ಇರುತ್ತದೆ’ ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು. ನಗರದ ಗಾಯಿತ್ರಿ ಸಮುದಾಯ ಭವನದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಶನಿವಾರ ನಡೆದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಯ ಬಗ್ಗೆ ಸದಾ ಚಿಂತನೆ ನಡೆಸಬೇಕು. ಅದಕ್ಕೆ ಉತ್ತಮ ಯೋಜನೆ ಹಾಕಿಕೊಂಡು ಕಾರ್ಯೋನ್ಮು ಖರಾಗಬೇಕು. ಸಮಾಜದಿಂದ ಎಲ್ಲವನ್ನೂ ಪಡೆದ ನಾವು ಸಮಾಜಕ್ಕೆ ಸಲ್ವವನ್ನಾದರೂ ಹಿಂತಿರುಗಿ ಕೊಡ ಬೇಕು. ಸಹಾಯ ಮಾಡುವ ಮನೋ ಭಾವ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ಯಾವುದೇ ಕೆಲಸ ಮಾಡಲು ಮುಂದಾದರೆ ಅದರಲ್ಲಿ  ಪ್ರಾಮಾಣಿಕತೆ ಇರಬೇಕು. ಪ್ರಯತ್ನವನ್ನೇ ಮಾಡದೆ ಪ್ರತಿಫಲ ಬಯಸುವುದು ತಪ್ಪು. ಅದು ಪ್ರಕೃತಿಗೆ ವಿರುದ್ಧವಾಗಿದೆ. ಪ್ರತಿಫಲ ಬಯಸದೇ ಸೇವೆ ಮಾಡುವವನು ಸಮಾಜದಲ್ಲಿ ಉತ್ತಮ ವ್ಯಕ್ತಿ ಆಗುತ್ತಾನೆ. ಯಾವುದೇ ಸಮುದಾಯದಲ್ಲಿ ಒಗ್ಗಟ್ಟು ಪ್ರಮುಖ ಆಗುತ್ತದೆ ಎಂದು ತಿಳಿಸಿದರು.

ADVERTISEMENT

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅರ್ಚಕರಿಗೆ ಗೌರವಧನವನ್ನು ಹೆಚ್ಚಳ ಮಾಡಿದೆ. ಹೀಗಾಗಿ ಅರ್ಚಕ ವೃತ್ತಿಮಾಡುವವರು ಗೌರವದಿಂದ ಜೀವನ ನಿರ್ವಹಣೆ ಮಾಡಬಹುದು. ಸರ್‌.ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಿಂದ ದೇಶಕ್ಕೆ ಹಲವು ಉಪಯುಕ್ತ ಕಾರ್ಯಗಳಾಗಿವೆ. ಅವರ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಿವೃತ್ತ ನ್ಯಾಯಮೂರ್ತಿ ರಾಮಾಜೋಯಿಸ್‌್ ಮಾತನಾಡಿ, ಸಮಾಜ ಸೇವೆಯಲ್ಲಿ ತೊಡಗಿದವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಆಗಬೇಕು. ಸೇವೆ ದೊಡ್ಡದಿರಲಿ ಅಥವಾ ಚಿಕ್ಕದಿರಲಿ ಸೇವೆ ಮಾಡುವ ಮನೋಭಾವ ಮುಖ್ಯ ಆಗಿದೆ. ಮಠ ಮಂದಿರಗಳಿಂದ ಸಂಸ್ಕೃತಿ ಉಳಿದಿದೆ. ಅವು ಮುಂದೆಯೂ ದೇಶದ ಪರಂಪರೆಯನ್ನು ಉಳಿಸುವ ಕಾರ್ಯವನ್ನು ಮುನ್ನಡೆಸಕೊಂಡು ಹೋಗಬೇಕು ಎಂದು ಹೇಳಿದರು.

ಸಂಸ್ಕಾರ ಒಳ್ಳೆಯ ಸಾಹಿತ್ಯದಿಂದ ಸಿಗುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ಜನರ ಆಲೋಚನೆಗಳು ಬದಲಾಗಿವೆ. ಕೇವಲ ಕೊಲೆ, ಸುಲಿಗೆ, ಭ್ರಷ್ಟಾಚಾರ ಪ್ರಕರಣಗಳನ್ನೇ ನೋಡುವ ಕರ್ಮ ನಮ್ಮದಾಗಿದೆ. ಶಿಸ್ತುಬದ್ಧ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ಸಾಹಿತ್ಯ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌. ಆತ್ಮಾನಂದ, ಮಾಜಿ ಶಾಸಕ ಎಂ. ಶ್ರೀನಿವಾಸ್‌, ಸಭಾ ಅಧ್ಯಕ್ಷ ಬೆಳ್ಳೂರು ಶಿವರಾಂ, ಪ್ರೊ. ಎಚ್‌.ಎಸ್‌. ನರಸಿಂಹಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.