ADVERTISEMENT

ಹೈನುಗಾರಿಕೆ ಆರ್ಥಿಕಾಭಿವೃದ್ಧಿಗೆ ವರದಾನ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 5:34 IST
Last Updated 28 ನವೆಂಬರ್ 2017, 5:34 IST

ಮದ್ದೂರು: ಗ್ರಾಮೀಣ ಭಾಗದ ಜನರ ಆರ್ಥಿಕಾಭಿವೃದ್ಧಿಗೆ ಹೈನುಗಾರಿಕೆ ವರದಾನವಾಗಿದ್ದು, ಮಹಿಳೆಯರ ಸ್ವಾವಲಂಬನೆ ಬದುಕಿಗೆ ರಹದಾರಿಯಾಗಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಸಮೀಪದ ಕುದರಗುಂಡಿ ಗ್ರಾಮದಲ್ಲಿ ಸೋಮವಾರ ಹಾಲು ಉತ್ಪಾದಕರ ಸಹಕಾರ ಸಂಘದ ‘ಕ್ಷೀರ ಭವನ’ಕ್ಕೆ ಚಾಲನೆ ಹಾಗೂ ಹಾಲು ಶೀತಲೀಕರಣ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ರೈತರು ಸಂಪ್ರದಾಯಿಕ ಬೇಸಾಯ ದೊಂದಿಗೆ ಹೈನುಗಾರಿಕೆಯನ್ನು ನಂಬಿಕೊಂಡಿದ್ದರಿಂದ ಮೂರು ವರ್ಷಗಳ ಬರದ ಪರಿಸ್ಥಿತಿಯನ್ನು ತಕ್ಕಮಟ್ಟಿಗೆ ಎದುರಿಸಲು ಸಾಧ್ಯವಾಯಿತು ಎಂದರು.

ಸಮಾಜದಲ್ಲಿ ಧಾರ್ಮಿಕ ಮೌಲ್ಯಗಳು ನಶಿಸುತ್ತಿವೆ. ನಮ್ಮಿಂದ ಮೌಲ್ಯಗಳು ಕಣ್ಮರೆಯಾದಂತೆ ಎಚ್ಚರವಹಿಸಬೇಕಿದೆ. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬುವತ್ತ ಪೋಷಕರು ಗಮನ ಹರಿಸಬೇಕು ಎಂದು ಹೇಳಿದರು.

ADVERTISEMENT

ಶಾಸಕ ಡಿ.ಸಿ.ತಮ್ಮಣ್ಣ, ಹೈನುಗಾರಿಕೆಯಿಂದಾಗಿ ಜನರು ಒಂದಿಷ್ಟಾದರೂ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ತಾಲ್ಲೂಕಿನಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೈನುಗಾರಿಕೆ ಸಾಕಷ್ಟು ಬೆಂಬಲವಾಗಿ ನಿಂತಿದೆ ಎಂದರು.

ಮನ್‌ಮುಲ್‌ ಅಧ್ಯಕ್ಷ ಕದಲೂರು ರಾಮಕೃಷ್ಣ, ನಿತ್ಯ 9.5 ಲಕ್ಷ ಲೀಟರ್‌ ಹಾಲು ಉತ್ಪಾದಿಸುವ ಮೂಲಕ ಜಿಲ್ಲೆ ಇಡೀ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಇದೀಗ ಹೈಟೆಕ್‌ ಮೆಗಾ ಡೇರಿ ಸ್ಥಾಪನೆ ಮೂಲಕ ಹೈನುಗಾರರ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಲಾಗಿದೆ. ಗುಣಮಟ್ಟದ ಹಾಲು ಪೂರೈಕೆ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕೋರಿದರು.

ಎಂಪಿಸಿಎಸ್ ಅಧ್ಯಕ್ಷ ಕೆ.ಎಂ.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ತಾ.ಪಂ ಸದಸ್ಯೆ ಮಹದೇವಮ್ಮ, ಮನ್‌ಮುಲ್‌ ಡೇರಿ ವ್ಯವಸ್ಥಾಪಕ ನಿರ್ದೇಶಕ ಡಾ.ಸುರೇಶಬಾಬು, ಉಪ ವ್ಯವಸ್ಥಾಪಕ ಡಾ.ರಾಮಕೃಷ್ಣ, ಉಪಾಧ್ಯಕ್ಷ ಸಿದ್ದೇಗೌಡ, ಜಯರಾಮು, ಬೋರೇಗೌಡ, ಶ್ರೀಕಾಂತ್, ರಮೇಶ್, ಸುಮತಿ, ಗೀತಾ, ನಾಗಬೋರಯ್ಯ, ಕಾರ್ಯದರ್ಶಿ ಸುಧಾಕರ್, ಗುಮಾಸ್ತ ದರ್ಶನ್, ಗ್ರಾಮದ ಮುಖಂಡರಾದ ಕೆ.ಬಿ.ಶಂಕರ್, ಪುಟ್ಟಸ್ವಾಮಿ, ಚಾಮರಾಜು, ರಾಜಶೇಖರ್, ಬಿ.ಸಿದ್ದಪ್ಪ, ಲಿಂಗಪ್ಪ, ಶಿವಲಿಂಗಯ್ಯ ಭಾಗವಹಿಸಿದ್ದರು.

ಭವ್ಯ ಮೆರವಣಿಗೆ: ಇದಕ್ಕೂ ಮುನ್ನ ಗ್ರಾಮದ ಹೆಬ್ಬಾಗಿಲಿನಿಂದ ಸ್ವಾಮೀಜಿಯನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ, ಪೂರ್ಣ ಕುಂಭ ಸ್ವಾಗತದೊಂದಿಗೆ ಮೆರವಣಿಗೆ ಮಾಡಲಾಯಿತು. ಪಟದ ಕುಣಿತ, ಗಾರುಡಿ ಗೊಂಬೆ, ಸೋಮನ ಕುಣಿತ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಯ ರಂಗು ಹೆಚ್ಚಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.